Thursday, July 2, 2026
Homeಜಿಲ್ಲಾ ಸುದ್ದಿಗಳುಎಂ. ಅಗ್ರಹಾರದ ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ. ನಾರಾಯಣ ಸ್ವಾಮಿ ಅವರಿಗೆ ಹಳೇ ವಿದ್ಯಾರ್ಥಿಗಳಿಂದ...

ಎಂ. ಅಗ್ರಹಾರದ ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ. ನಾರಾಯಣ ಸ್ವಾಮಿ ಅವರಿಗೆ ಹಳೇ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ

ಎಂ. ಅಗ್ರಹಾರದ ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ. ನಾರಾಯಣ ಸ್ವಾಮಿ ಅವರಿಗೆ ಹಳೇ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ

*ಶಾಲಾ ಕಟ್ಟಡ ನಿರ್ಮಿಸಿಕೊಡುವುದಾಗಿ ಶಾಸಕ ಸಮೃದ್ಧಿ ವಿ. ಮಂಜುನಾಥ್‌ ಆಶ್ವಾಸನೆ

ಮುಳಬಾಗಿಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಳಬಾಗಿಲು ತಾಲೂಕಿನ ಎಂ. ಅಗ್ರಹಾರದ ಜಯಪ್ರಕಾಶ್‌ ನಾರಾಯಾಣ್‌ ಪ್ರೌಢಶಾಲೆಯಲ್ಲಿ ಕಟ್ಟಡ ನಿರ್ಮಿಸಿಕೊಡುವುದಾಗಿ ಶಾಸಕ ಸಮೃದ್ಧಿ ವಿ. ಮಂಜುನಾಥ್‌ ಆಶ್ವಾಸನೆ ನೀಡಿದರು.
ಎಂ. ಅಗ್ರಹಾರದ ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯಲ್ಲಿ 35 ವರ್ಷಗಳ ಶಿಕ್ಷಣ ಸೇವೆ ಸಲ್ಲಿಸಿ ಜೂನ್ 30ರಂದು ವಯೋನಿವೃತ್ತರಾದ ಮುಖ್ಯೋಪಾಧ್ಯಾಯ ಕೆ.ಬಿ. ನಾರಾಯಣ ಸ್ವಾಮಿ ಅವರಿಗೆ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನು ಲಂಡನ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.
1991ರಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಕೆ.ಬಿ. ನಾರಾಯಣ ಸ್ವಾಮಿ ಅವರು, ಶಾಲೆಯ ಬೆಳವಣಿಗೆಗೆ ಹಾಗೂ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದು ಶ್ಲಾಘನೀಯ. ಅವರ ಹಳೇ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಇಷ್ಟು ಅದ್ಧೂರಿ ಸಮಾರಂಭ ಮಾಡುತ್ತಿರುವುದನ್ನು ಗಮನಿಸಿದರೇ ಇವರ ಸಾಧನೆ ಏನೆಂಬುದು ತಿಳಿಯುತ್ತಿದೆ. ಇಂಥ ಶಿಕ್ಷಕರಿದ್ದರೆ, ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಅನುಮಾನವಿಲ್ಲ ಎಂದರು. ಇನ್ನು, ಜಯಪ್ರಕಾಶ್‌ ನಾರಾಯಾಣ್‌ ಪ್ರೌಢಶಾಲೆಯಲ್ಲಿ ಕಟ್ಟಡ ನಿರ್ಮಾಣದ ಜವಾಬ್ದಾರಿ ತೆಗೆದುಕೊಳ್ಳುವುದಾಗಿಯೂ ಇದೇವೇಳೆ ಆಶ್ವಾಸನೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಬಿ. ನಾರಾಯಣ ಸ್ವಾಮಿ, ಮಕ್ಕಳೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು. ನನ್ನೊಂದಿಗೆ ನಿಂತ ಹಲವು ಶಿಕ್ಷಕರು ಸಹ ಈ ಸನ್ಮಾನಕ್ಕೆ ಅರ್ಹರು ಎಂದು ತಮ್ಮ ಸಹ ಶಿಕ್ಷಕರನು ನೆನೆದರು.
ಸಮಾರಂಭದಲ್ಲಿ ಸಾವಿರಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಪಾಲ್ಗೊಂಡು ಸನ್ಮಾನಿಸಿದರು. ಇದೇವೇಳೆ ‘ಹಸಿರು ನಮನ’ ಅಭಿಯಾನದಡಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಜೊತೆಗೆ, ೫೦೦ಕ್ಕೂ ಹೆಚ್ಚು ಸಸಿಗಗಳು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರದಡಿ ೫೦ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಎ.ಎನ್. ನಾಗೇಂದ್ರ ಪ್ರಸಾದ್, ಜಯಪ್ರಕಾಶ್ ನಾರಾಯಣ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ವೈ.ಎಂ. ರೆಡ್ಡಿ, ಸಂಸ್ಥೆಯ ಕಾರ್ಯದರ್ಶಿ ರಘುಪತಿ ರೆಡ್ಡಿ, ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಂಶುಪಾಲ ಎ.ವಿ. ರೆಡ್ಡಿ, ನಿವೃತ್ತ ಪ್ರಾಧ್ಯಾಪಕಿ ಬಿ. ಕಮಲಮ್ಮ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ