Monday, June 29, 2026
Homeಬೆಂಗಳೂರುಕೊರಚ ಜನಾಂಗದ ವಿದ್ಯಾರ್ಥಿಗಳಿಗೆ “ಸಾಧನ ಸಿರಿ” ಪ್ರತಿಭಾ ಪುರಸ್ಕಾರ ಪ್ರದಾನ..

ಕೊರಚ ಜನಾಂಗದ ವಿದ್ಯಾರ್ಥಿಗಳಿಗೆ “ಸಾಧನ ಸಿರಿ” ಪ್ರತಿಭಾ ಪುರಸ್ಕಾರ ಪ್ರದಾನ..

ಕೊರಚ ಜನಾಂಗದ ವಿದ್ಯಾರ್ಥಿಗಳಿಗೆ “ಸಾಧನ ಸಿರಿ” ಪ್ರತಿಭಾ ಪುರಸ್ಕಾರ ಪ್ರದಾನ..

ಕೊರಚ ಜನಾಂಗದ ಅಧ್ಯಯನಕ್ಕೆ ನಾಲ್ಕ ವರ್ಷ ತಮಗೆ ಸಮುದಾಯದವರು ಮಾಹಿತಿಯನ್ನೇ ನೀಡಿರಲಿಲ್ಲ: ಸಂಶೋಧಕ ಡಾ. ಗಿರಿಧರ ರಾವ್ ಹವಲ್ದಾರ್
ಅವಕಾಶ ವಂಚಿತ ಕೊರಚ ಜನಾಂಗದ ವಿದ್ಯಾರ್ಥಿಗಳಿಗೆ “ಸಾಧನ ಸಿರಿ” ಪ್ರತಿಭಾ ಪುರಸ್ಕಾರ ಪ್ರದಾನ

ಬೆಂಗಳೂರು,ಜೂ.28: ಅತ್ಯಂತ ಹಿಂದುಳಿದ ಕೊರಚ ಸಮುದಾಯದ ಬಗ್ಗೆ ಸಂಶೋಧನೆ ನಡೆಸುವುದು ತಮಗೆ ತ್ರಾಸದಾಯವಾಗಿತ್ತು. 8 ವರ್ಷಗಳ ನಿರಂತರ ಸಂಶೋಧನೆಯಲ್ಲಿ ಮೊದಲ ನಾಲ್ಕು ವರ್ಷ ಕೊರಚ ಜನಾಂಗದ ಯಾರೂ ಕೂಡ ತಮಗೆ ಮಾಹಿತಿಯನ್ನೇ ನೀಡಲಿಲ್ಲ ಎಂದು ಕೊರಚ ಸಂಸ್ಕೃತಿ ಚಿಂತಕ ಹಾಗೂ ಸಂಶೋಧಕ ಡಾ. ಗಿರಿಧರ ರಾವ್ ಹವಲ್ದಾರ್ ಹೇಳಿದ್ದಾರೆ.
ಗಾಂಧಿಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕೊರಚ ಮಹಾಸಭಾದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಲ್ಲಿ ಅಮೋಘ ಸಾಧನೆ ಮಾಡಿದ ಸಮುದಾಯದ ತಲಾ 10 ವಿದ್ಯಾರ್ಥಿಗಳಿಗೆ 10 ಸಾವಿರ ರೂ ನಗದು ಒಳಗೊಂಡಂತೆ ‘ಸಾಧನ ಸಿರಿ’ ಪ್ರತಿಭಾ ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಉನ್ನತ ಅಧಿಕಾರಿಗಳನ್ನು ಸಹ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಡಾ. ಗಿರಿಧರ ರಾವ್ ಹವಲ್ದಾರ್, 14 ಜಿಲ್ಲೆಗಳಲ್ಲಿ 8 ವರ್ಷಗಳ ಕಾಲ ಸಂಚರಿಸಿ ವ್ಯಾಪಕ ಸಂಶೋಧನೆ ಮಾಡಿದೆ. ಆದರೆ ನಾವು ಕೇಳಿದ ಯಾವುದೇ ಮಾಹಿತಿಯನ್ನು ಜನಾಂಗ ನೀಡುತ್ತಿರಲಿಲ್ಲ. ಏಕೆಂದರೆ ಸಮುದಾಯವನ್ನು ಸಮಾಜ ಅತ್ಯಂತ ಕೀಳಾಗಿ ನೋಡುತ್ತಿದ್ದು, ಶೋಷಣೆ ಮಾಡುತ್ತಿದೆ. ಹೀಗಾಗಿ ಯಾರೊಂದಿಗೂ ಮಾತನಾಡಲು ಕೊರಚರು ಹಿಂಜರಿಯುತ್ತಿದ್ದರು. ‘ಕೊರಚರು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಈ ಸಂಶೋಧನಾ ಪ್ರಬಂಧ ಅತ್ಯಮೂಲ್ಯ ಕೊಡುಗೆಯಾಗಿದೆ. ಕೊರಚ ಜನಾಂಗ ಕುರಿತಾದ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಡೆದ ಮೊಟ್ಟಮೊದಲ ಸಮಗ್ರ ಸಂಶೋಧನೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ ಎಂದರು.
ಒಂದು ಸಮುದಾಯದ ಅಸ್ಮಿತೆಯನ್ನು ಅದರ ಇತಿಹಾಸ, ಭಾಷೆ, ಮತ್ತು ಆಚರಣೆಗಳ ಮೂಲಕ ಹುಡಕಬೇಕು. ಕೊರಚ ಜನಾಂಗದ ಬದುಕಿನ ಸಂಕೀರ್ಣತೆಗಳನ್ನು, ಅವರ ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಅತ್ಯಂತ ನಿಖರವಾಗಿ ದಾಖಲಿಸಿದ್ದೇನೆ. ಕ್ಷೇತ್ರಕಾರ್ಯದ ಹಸಿ ಅನುಭವಗಳೊಂದಿಗೆ ಶಾಸನೋಕ್ತ ಆಧಾರಗಳನ್ನು ಬಳಸಿಕೊಂಡು ಸಮುದಾಯದ ಏಳುಬೀಳುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಜಾಗತೀಕರಣದ ಅಬ್ಬರದಲ್ಲಿ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳು ತಮ್ಮ ಮೂಲ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿವೆ. ಈ ಅಧ್ಯಯನ ಮುಂದಿನ ಪೀಳಿಗೆಗೆ ದಾರಿದೀಪವಾಗಲಿದೆ ಎಂದರು.
ಅಖಿಲ ಕರ್ನಾಟಕ ಕೊರಚ ಮಹಾಸಭಾ ರಾಜ್ಯಾಧ್ಯಕ್ಷ ಆದರ್ಶ ಯಲ್ಲಪ್ಪ ಮಾತನಾಡಿ, ಕೊರಚ ಜನಾಂಗ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಸಮಯದಾಯವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಮಹಾಸಭಾ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಮಾಡಿ ಅಧಿಕಾರಿಗಳಾಗಿ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು.
ಹಿರಿಯ ನ್ಯಾಯವಾದಿ ಅನಂತ ನಾಯಕ್, ಮಹಾಸಭಾದ ಗೌರವಾಧ್ಯಕ್ಷ ಬೋಜರಾಜ್ ಮುಟಗಾರ, ಉಪಾಧ್ಯಕ್ಷ ಸೀತಾರಾಮಯ್ಯ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಹಾಗೂ ರಾಜ್ಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.

ಹೆಚ್ಚಿನ ಸುದ್ದಿ