Sunday, June 28, 2026
Homeರಾಜ್ಯಭೂ ಮಾಲೀಕರ ತ್ಯಾಗ ಸ್ಮರಣೆಗೆ ವಾಲ್ ಆಫ್ ಗ್ರ್ಯಾಟಿಟ್ಯೂಡ್: ಸಿಎಂ ಡಿ.ಕೆ. ಶಿವಕುಮಾರ್

ಭೂ ಮಾಲೀಕರ ತ್ಯಾಗ ಸ್ಮರಣೆಗೆ ವಾಲ್ ಆಫ್ ಗ್ರ್ಯಾಟಿಟ್ಯೂಡ್: ಸಿಎಂ ಡಿ.ಕೆ. ಶಿವಕುಮಾರ್

ಭೂ ಮಾಲೀಕರ ತ್ಯಾಗ ಸ್ಮರಣೆಗೆ ವಾಲ್ ಆಫ್ ಗ್ರ್ಯಾಟಿಟ್ಯೂಡ್: ಸಿಎಂ ಡಿ.ಕೆ. ಶಿವಕುಮಾರ್

ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ

ಶಾಲಾ ಮಕ್ಕಳಿಗೆ ಗಿಡ ನೆಟ್ಟು ಬೆಳೆಸುವ ಸ್ಪರ್ಧೆ

ಇತಿಹಾಸ ಸೃಷ್ಟಿಸಲು ನನಗೆ ಇಷ್ಟ

ನಾಡಪ್ರಭು ಕೆಂಪೇಗೌಡರು ಸರ್ವಜನಾಂಗದ ನಾಯಕ

ಬೆಂಗಳೂರು, ಜೂ.27:

“ಕೈಗಾರಿಕಾ ಪ್ರದೇಶ, ಶಾಲೆಗಳು, ಕೆರೆ, ರಸ್ತೆ ನಿರ್ಮಾಣ ಸೇರಿದಂತೆ ಜನಪರ ಯೋಜನೆಗಳಿಗೆ ಯಾವುದೇ ತಕರಾರು ಮಾಡದೇ ಜಾಗ ನೀಡುವ ಭೂ ಮಾಲೀಕರ ಹೆಸರನ್ನು ವಾಲ್ ಆಫ್ ಗ್ರಾಟಿಟ್ಯೂಡ್ (ಕೃತಜ್ಞತಾ ಫಲಕ) ನಲ್ಲಿ ಸೇರಿಸಲು ಸರ್ಕಾರ ತೀರ್ಮಾನಿಸಿದೆ. ಆ ಮೂಲಕ ಭೂ ಮಾಲೀಕರ ತ್ಯಾಗ ಸ್ಮರಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೂತನವಾಗಿ ನಿರ್ಮಿಸುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ ಶನಿವಾರ ನಡೆದ 517 ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಇಂದು ನಾವು ಎಸ್.ಎಂ. ಕೃಷ್ಣ ಅವರ ಹೆಸರಿನಲ್ಲಿ 10 ಪಥಗಳ ರಸ್ತೆಗೆ ಚಾಲನೆ ನೀಡಿದ್ದೇವೆ. ಈ ರಸ್ತೆ 11 ಕಿ.ಮೀ.ಗೆ ನಿಲ್ಲುವುದಿಲ್ಲ. ಮುಂದೆ ಇದು 123 ಕಿ.ಮೀ ರಸ್ತೆಯಾಗಿ ವಿಸ್ತರಣೆಯಾಗಲಿದೆ. ಈ ರಸ್ತೆಯಲ್ಲಿ ವಾಲ್ ಆಪ್ ಗ್ರಾಟಿಟ್ಯೂಡ್ (ಉಪಕಾರ ಸ್ಮರಣೆ) ನಿರ್ಮಿಸಲು ಮುಂದಾಗಿದ್ದೇವೆ. ಆ ಮೂಲಕ ಈ ರಸ್ತೆಗಾಗಿ ಜಮೀನು ನೀಡಿದವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ಕರ್ನಾಟಕ ಸರ್ಕಾರ ಮುಂದಿನ ದಿನಗಳಲ್ಲಿ ಮಾಡಲಿದೆ. ಇದನ್ನು ಎಲ್ಲಾ ಕಡೆಗಳಲ್ಲೂ ಮಾಡಲಾಗುವುದು” ಎಂದು ತಿಳಿಸಿದರು.

“ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಯಾವುದೇ ಜಮೀನು ಉಳುಮೆ ಮಾಡದೇ ಮಟ್ಟ ಮಾಡಲು ಸಾಧ್ಯವಿಲ್ಲ. ಭೂಮಿ ಕಳೆದುಕೊಂಡಬರ ಬಗ್ಗೆ ನಮಗೆ ಕಾಳಜಿ ಇದೆ. ಕೆಂಗೇರಿ ಹಾಗೂ ಯಲಹಂಕ ಪಟ್ಟಣ ನಿರ್ಮಾಣ ಮಾಡಿದ್ದು ಹೇಗೆ? ಪರಮೇಶ್ವರ್ ಅವರು ತುಮಕೂರಿನಲ್ಲಿ ಟೌನ್ ಶಿಪ್ ಮಾಡಲು ಮುಂದಾಗಿದ್ದಾರೆ. ಅವು ಭೂಮಿಯಲ್ಲವೇ? ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ, ತ್ಯಾಗ ಮಾಡುತ್ತೇವೆ ಎಂಬುದು ಮುಖ್ಯ. ಈ 10 ಪಥದ ರಸ್ತೆಗೆ ಭೂಮಿ ತ್ಯಾಗ ಮಾಡಿದ ಎಲ್ಲರಿಗೂ ಸಾಷ್ಟಾಂಗ ನಮನ ಸಲ್ಲಿಸುತ್ತೇನೆ” ಎಂದರು.

ಶಾಲಾ ಮಕ್ಕಳಿಗೆ ಗಿಡ ನೆಟ್ಟು ಬೆಳೆಸುವ ಸ್ಪರ್ಧೆ

“ಹಸಿರು ಬೆಂಗಳೂರು ಕಟ್ಟಬೇಕು, ಆ ಮೂಲಕ ಕೆಂಪೇಗೌಡರ ದೂರದೃಷ್ಟಿ ಉಳಿಯಬೇಕು ಎಂದು ಬಿಡಿಎ ವತಿಯಿಂದ ಇಂದು 15 ಲಕ್ಷ ಸಸಿಗಳನ್ನು ನೆಡಲಾಗಿದೆ. ಇದು ದಾಖಲೆಯ ತೀರ್ಮಾನ. ಬಾಲಗಂಗಾಧರ ಸ್ವಾಮೀಜಿಗಳು ಕೃಷ್ಣ ಅವರ ಕಾಲದಲ್ಲಿ 5 ಕೋಟಿ ಸಸಿಗಳನ್ನು ನೆಡಲು ಸಂಕಲ್ಪ ಮಾಡಿದ್ದನ್ನು ನಾವು ಮರೆಯಲು ಸಾಧ್ಯವಿಲ್ಲ. ಇದೇ ರೀತಿ ಬೆಂಗಳೂರಿನಲ್ಲಿ ಪ್ರತಿ ಶಾಲೆಗಳು ಒಂದೊಂದು ಪ್ರದೇಶದ ಉಸ್ತುವಾರಿ ವಹಿಸಿಕೊಂಡು ಅಲ್ಲಿ ಮಕ್ಕಳಿಂದ ಗಿಡ ನೆಡೆಸಿ ಬೆಳೆಸುವ ಕಾರ್ಯಕ್ರಮ ಮಾಡಬೇಕು. ಈ ವಿಚಾರದಲ್ಲಿ ಜಿಬಿಎ ವತಿಯಿಂದ ಸ್ಪರ್ಧೆ ಏರ್ಪಡಿಸಲಾಗುವುದು” ಎಂದು ತಿಳಿಸಿದರು.

“ಬೆಂಗಳೂರು ವಿವಿಯಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಕೆ.ಹೆಚ್ ಮುನಿಯಪ್ಪನವರು ತಮ್ಮ ಕ್ಷೇತ್ರದಲ್ಲಿ 9.5 ಎಕರೆ ಜಾಗ ನೀಡಿದ್ದು, ಅಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಹುತ್ರಿದುರ್ಗದಲ್ಲಿ 10 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅಪಮಾನ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ. ಆ ದೃಷ್ಟಿಯಿಂದ ಕೃಷ್ಣ ಅವರ ಸಾಧನೆ ಸ್ಮರಿಸುತ್ತಾ ಈ ರಸ್ತೆಗೆ ಅವರ ಹೆಸರು ಇಟ್ಟಿದ್ದೇವೆ. ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ಶಿವರಾಂ ಕಾರಂತ ಬಡಾವಣೆ, ವಿಕಾಸ ಸೌಧ ನಿರ್ಮಿಸಿದವರು ಎಸ್.ಎಂ ಕೃಷ್ಣ ಅವರು” ಎಂದರು.

ನಾಡಪ್ರಭು ಕೆಂಪೇಗೌಡರು ಸರ್ವಜನಾಂಗದ ನಾಯಕ

“ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ಮಹಾನ್ ಚೇತನ, ಕೆರಗಳನ್ನು ಕಟ್ಟಿದ ಭಗೀರಥ, ದೇವಾಲಯಗಳನ್ನು ನಿರ್ಮಿಸಿದ ದೈವ ಭಕ್ತ, ವಿವಿಧ ಪೇಟೆಗಳನ್ನು ನಿರ್ಮಿಸಿ ಎಲ್ಲಾ ಸಮುದಾಯದವರಿಗೆ ಆದ್ಯತೆ ನೀಡಿ ಆರ್ಥಿಕ ಶಕ್ತಿ ತುಂಬಿದ, ಕೆಚ್ಚೆದೆಯ ಹಾಗೂ ಸರ್ವ ಜನಾಂಗದ ನಾಯಕರು” ಎಂದು ಬಣ್ಣಿಸಿದರು.

“ಈ ಕಾರ್ಯಕ್ರಮ ಕೆಂಪೇಗೌಡರ ಮೇಲಿನ ಪ್ರೀತಿಯ ಕಾರ್ಯಕ್ರಮ ಎಂಬುದಕ್ಕಿಂತ ಕೆಂಪೇಗೌಡರ ನೀತಿಯನ್ನು ಅಳವಡಿಸಿಕೊಳ್ಳುವ ಕಾರ್ಯಕ್ರಮವಾಗಿದೆ. ಕೆಂಪೇಗೌಡರು ಹಾಕಿದ ಅಡಿಪಾಯದ ಮೇಲೆ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಅವರ ಸಾಧನೆ, ದೂರದೃಷ್ಟಿ ತೀರ್ಮಾನ, ತ್ಯಾಗವನ್ನು ನಾವು ಸ್ಮರಿಸಬೇಕು. ಅವರ ಹೆಸರು ಶಾಶ್ವತವಾಗಿ ಉಳಿಯಲಿ ಎಂದು ನಾವು ಅನೇಕ ಯೋಜನೆ ರೂಪಿಸಿದ್ದೇವೆ” ಎಂದು ತಿಳಿಸಿದರು.

“ಬೆಂಗಳೂರಿಗರು ಮೂರು K ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬೆಂಗಳೂರು ಕಟ್ಟಿದ ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಹಾಗೂ ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಎಸ್.ಎಂ. ಕೃಷ್ಣ ಅವರು. ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ಶ್ರೀ ನಂಜಾವಧೂತ ಸ್ವಾಮೀಜಿಗಳು ಸೇರಿ ಜೂನ್ 27ರಂದು ಕೆಂಪೇಗೌಡ ಜಯಂತಿ ಆಚರಣೆ ಮಾಡಬೇಕು ಎಂದು ತೀರ್ಮಾನ ಮಾಡಿದ ಬಳಿಕ ನಾವು ಕೆಂಪೇಗೌಡ ಜಯಂತಿ ಆಚರಿಸಿಕೊಂಡು ಬರುತ್ತಿದ್ದೇವೆ. ಆ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತ ರೇವಣ್ಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ

“ಈ ಹಿಂದೆ ಸರ್ಕಾರ ಪೆರಿಫೆರಲ್ ರಿಂಗ್ ರಸ್ತೆ ಮಾಡಲು ತೀರ್ಮಾನಿಸಿತ್ತು. ಆದರೆ ಕಾರ್ಯರೂಪಕ್ಕೆ ತಂದಿರಲಿಲ್ಲ. ನಾನು ಬೆಂಗಳೂರು ನಗರದ ಜವಾಬ್ದಾರಿ ವಹಿಸಿಕೊಂಡ ಬಳಿಕ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿ ಈ ಯೋಜನೆ ಜಾರಿಗೆ ಮುಂದಾಗಿದ್ದೇವೆ. ನಾವು ಕೆಂಪೇಗೌಡರು, ಕೆಂಗಲ್ ಹನುಮಂತಯ್ಯ ಹಾಗೂ ಕೃಷ್ಣ ಅವರು ಸಾಕ್ಷಿಗುಡ್ಡೆ ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ನಾವು ಇಂದು ಈ ಮೂವರನ್ನು ಸ್ಮರಿಸುತ್ತಿದ್ದೇವೆ” ಎಂದರು.

“123 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ ನಿರ್ಮಾಣ ಪ್ರಕ್ರಿಯೆ ಚಾಲನೆಯಲ್ಲಿದ್ದು, ಟೆಂಡರ್ ಕರೆಯಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆ ಸೇರುವ ಹಂತಕ್ಕೂ ಅಂತಿಮ ಅಧಿಸೂಚನೆ ಸಧ್ಯದಲ್ಲೇ ಹೊರಡಿಸುತ್ತೇವೆ. ಈ ರಸ್ತೆ ಇಲ್ಲವಾದರೆ ಬೆಂಗಳೂರು ಉಳಿಯಲು ಸಾಧ್ಯವಿಲ್ಲ. ಹೀಗಾಗಿ ನಾನು ದಿಟ್ಟ ತೀರ್ಮಾನ ಮಾಡಲಿದ್ದೇನೆ. ಭೂಮಿ ಕಳೆದುಕೊಳ್ಳುವ ಜಮೀನು ಮಾಲೀಕರಿಗೆ 35% ವಾಣಿಜ್ಯ ಭೂಮಿ, 40% ವಸತಿ ಪ್ರದೇಶ ಭೂಮಿ, ಟಿಡಿಆರ್ ನೀಡಲು ಸರ್ಕಾರ ಮುಂದಾಗಿದೆ. ಭೂ ಮಾಲೀಕರು ತಮಗೆ ಯಾವ ಆಯ್ಕೆ ಬೇಕೋ ಅದನ್ನು ತೆಗೆದುಕೊಳ್ಳಬಹುದು” ಎಂದು ವಿವರಿಸಿದರು.

ಇತಿಹಾಸ ಸೃಷ್ಟಿಸಲು ನನಗೆ ಇಷ್ಟ

ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ನನಗೆ ಇತಿಹಾಸ ಓದುವುದು, ಸ್ಮರಿಸುವುದಕ್ಕಿಂತ, ಇತಿಹಾಸ ಸೃಷ್ಟಿಸಲು ನನಗೆ ಇಷ್ಟ. ದೇವರು ವರ, ಶಾಪ ನೀಡುವುದಿಲ್ಲ. ಅವಕಾಶ ಮಾತ್ರ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಯಾವ ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ನೀವು ಕೊಟ್ಟಿರುವ ಶಕ್ತಿಯನ್ನು ಮರೆಯಲು ಸಾಧ್ಯವಿಲ್ಲ” ಎಂದರು.

“ಹೆಬ್ಬಾಳದ ಬಳಿ ಕಡಿಮೆ ಅಂತರದ ಟನಲ್ ರಸ್ತೆ ನಿರ್ಮಾಣ ಕೆಲಸವನ್ನು ಕೆಲವೇ ದಿನಗಳಲ್ಲಿ ಆರಂಭ ಮಾಡಲಾಗುವುದು. ಬೆಂಗಳೂರು ವಿಶ್ವದ ನಗರ. ಇಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ದೊಡ್ಡ ಟನಲ್ ರಸ್ತೆ ನಿರ್ಮಾಣ ಸೇರಿದಂತೆ ಅನೇಕ ಯೋಜನೆ ರೂಪಿಸಲಾಗಿದೆ. ಜೊತೆಗೆ ಅಧಿಕಾರಿಗಳ ತಂಡ ರಚಿಸಲಾಗುವುದು. ನೀವು ನನ್ನ ಮೇಲೆ ಇಟ್ಟಿರುವ ಅಪಾರ ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ” ಎಂದು ಭರವಸೆ ನೀಡಿದರು.

ಹೆಚ್ಚಿನ ಸುದ್ದಿ