ಚುನಾವಣೆ ಹತ್ತಿರ ಬರುವಾಗ ಬಹಿರಂಗವಾಗಿ ಹಿಂಸೆಗೆ ಕರೆ ನೀಡಿ ಸಚಿವ ಮುನಿರತ್ನ ವಿವಾದ ಸೃಷ್ಟಿಸಿದ್ದಾರೆ. ಜಾಲಹಳ್ಳಿ ವಾರ್ಡಿನ ಖಾತಾನಗರಕ್ಕೆ ಯಾರಾದರೂ ಬಂದರೆ “ಹೊಡೆದು ಕಳಿಸಿ” ಎಂದು ಮುನಿರತ್ನ ಹೇಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
“ಯಾರಾದ್ರೂ ಒಳಗೆ ಬಂದ್ರೆ ಅಟ್ಟಾಡಿಸಿಕೊಂಡು ಹೊಡೀರಿ, ಯಾರೇ ಬಂದ್ರೂ ಹೊಡೀರಿ, ಉಳಿದದ್ದು ನಾನು ನೋಡಿಕೊಳ್ತೀನಿ, ಹೇಗೆ ಹೊಡೀಬೇಕಂದ್ರೆ ಅವರು ತಿರುಗಿ ನೋಡದೆ ಅವರು ಓಡ್ಬೇಕು” ಎಂದು ಮುನಿರತ್ನ ಬಹಿರಂಗವಾಗಿ ಹಿಂಸೆಗೆ ಕರೆ ನೀಡಿದ್ದಾರೆ.
ಯಾರ್ಯಾರು ಹೊಡೀತಿರಿ ಕೈ ಎತ್ತಿ ನೋಡೋಣ ಎಂದು ಮುನಿರತ್ನ ಹೇಳುವಾಗ ಸಭಿಕರು ಜೋರಾಗಿ ಕಿರುಚುತ್ತಾರೆ.
“ಸಾಕು, ನಾಳೆ ನಮ್ಮದೇ, ನಾಳೆ ನಾವು ಹಾಕುವ ವೋಟ್ ನಮ್ಮ ನಾಳೆಯನ್ನು ಡಿಸೈಡ್ ಮಾಡುತ್ತೆ” ಎಂದು ಮುನಿರತ್ನ ಸಾರ್ವಜನಿಕ ಸಮಾರಂಭದಲ್ಲಿ ಬಹಿರಂಗ ಬೆದರಿಕೆ ಹಾಕಿದ್ದಾರೆ.
“ಸಾರ್ವಜನಿಕ ಸಭೆಯಲ್ಲಿ ನಿಂತು ತಮಿಳಿನಲ್ಲಿ ಪ್ರಚೋದಿಸಿ ಚುನಾವಣೆಯ ಸಮಯದಲ್ಲಿ ನೇರವಾಗಿ ಅಶಾಂತಿ ಸೃಷ್ಟಿಸಲೆತ್ನಿಸುತ್ತಾರೆಂದರೆ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕ ಹುಟ್ಟಿಸುತ್ತದೆ” ಎಂದು ಆರ್ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಟ್ವೀಟ್ ಮಾಡಿದ್ದಾರೆ.
