ದಾವಣಗೆರೆಯ ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪದ ಬಳಿ ಕಾಡಾನೆ ಸೆರೆಗೆ ಕಾರ್ಯಾಚರಣೆ ವೇಳೆ ಸಕ್ರೆಬೈಲು ಆನೆ ಕ್ಯಾಂಪಿನ ವೈದ್ಯಾಧಿಕಾರಿ ಡಾ. ವಿನಯ್ ಅವರ ಮೇಲೆ ಆನೆ ದಾಳಿ ಮಾಡಿದೆ. ಜಿಲ್ಲೆಯ ಸೋಮಲಾಪುರದಲ್ಲಿ ಕಾಡಾನೆ ದಾಳಿಯಿಂದ ಯುವತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆ ಜಿಲ್ಲೆ ಚನ್ನಗಿರಿ, ಹೊನ್ನಾಳಿ ತಾಲೂಕಿನಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ.
ಮೂರನೇ ದಿನದ ಕಾರ್ಯಾಚರಣೆ ವೇಳೆ ವೈದ್ಯ ವಿನಯ್ ಮೇಲೆ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದ ಗಾಯಗೊಂಡಿರುವ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಹಿರಿಯ ವೈದ್ಯ ವಿನಯ್ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ವಿದ್ಯಾರ್ಥಿನಿ ಕವನಾ ಅವರ ಮೇಲೆ ದಾಳಿ ಮಾಡಿ ಸಾಯಿಸಿದ್ದ ಕಾಡಾನೆ ಸೆರೆಗೆ ಎರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಮಂಗಳವಾರ ಬೆಳಿಗ್ಗೆ ಆನೆ ಸೆರೆ ಹಿಡಿಯುವ ವೇಳೆ ಗನ್ನಿಂದ ಅರವಳಿಕೆ ಚುಚ್ಚುಮದ್ದು ನೀಡಲು ಹೋದಾಗ ಆ ಶಬ್ದದ ಜಾಡು ಹಿಡಿದು ಬಂದು ಡಾ.ವಿನಯ್ ಅವರ ಮೇಲೆ ದಾಳಿ ಮಾಡಿದೆ. ಆನೆ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋಣ್ ತಂಡ, ಮಾವುತರು, ಪಶು ವೈದ್ಯಾಧಿಕಾರಿಗಳ ತಂಡದೊಡನೆ ಕಾರ್ಯಾಚರಣೆ ಆರಂಭಿಸಿದ್ದಾರೆ.
