ಮೈಸೂರು: ಬಿಜೆಪಿಯ ಮತ್ತೊಂದು ಹಿರಿಯ ನಾಯಕನಿಗೆ ಟಿಕೆಟ್ ಕೈತಪ್ಪಿದೆ. ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಆಗಿದ್ದು, ಮಾಜಿ ಸಚಿವ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಸ್ಎ ರಾಮದಾಸ್ಗೆ ಈ ಬಾರಿಯೂ ಟಿಕೆಟ್ ಮಿಸ್ ಆಗಿದೆ
ಮೊದಲ ಮತ್ತು ಎರಡನೇ ಪಟ್ಟಿ ಬಿಡುಗಡೆ ಮಾಡಿ ಪಕ್ಷದೊಳಗಿಂದಲೇ ತೀವ್ರ ವಿರೋಧವನ್ನು ಎದುರಿಸಿದ ಬಿಜೆಪಿ, ಅಳೆದು ತೂಗಿ 3ನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಈಗಾಗಲೇ 212 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ, ಒಟ್ಟು 12 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿತ್ತು. ಮೂರನೇ ಪಟ್ಟಿಯಲ್ಲಿ 10 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ್ದು, 2 ಕ್ಷೇತ್ರಗಳ ಟಿಕೆಟ್ ಅನ್ನು ಘೋಷಿಸದೆ ಸಸ್ಪೆನ್ಸ್ ಇಟ್ಟುಕೊಂಡಿದೆ.
ಹಿರಿಯ ನಾಯಕ ರಾಮದಾಸ್ಗೆ ಈ ಬಾರಿ ಟಿಕೆಟ್ ಸಿಗುವ ಬಗ್ಗೆ ಮೊದಲೇ ಊಹಾಪೋಹಗಳು ಎದ್ದಿದ್ದವು. ಇದೇ ಕಾರಣಕ್ಕೆ ಅವರ ಮನೆ ಮುಂದೆ ಅಭಿಮಾನಿಗಳು, ಕಾರ್ಯಕರ್ತರು ಗಲಾಟೆ ಮಾಡಿದ್ದರು. ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ, ರಾಮದಾಸ್ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ ಯಾವ ಪ್ರತಿಭಟನೆಗೂ ಬಗ್ಗದ ಬಿಜೆಪಿ ಹೈಕಮಾಂಡ್, ರಾಮದಾಸ್ಗೆ ಟಿಕೆಟ್ ನೀಡದೆ, ಹೊಸಮುಖ ಶ್ರೀವತ್ಸ ಎಂಬವರಿಗೆ ಟಿಕೆಟ್ ನೀಡಿದೆ.
ಈಗಾಗಲೇ ಟಿಕೆಟ್ ತಪ್ಪಿರುವ ಕೋಪದಲ್ಲಿ ಸವದಿ, ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ರಾಮದಾಸ್ ನಡೆಯೇನು ಎನ್ನುವುದು ಕುತೂಹಲ ಹುಟ್ಟಿಸಿದೆ.
