ಹಾಸನ : ವಿಧಾನಸಭಾ ಚುನಾವಣೆ ದೇವೇಗೌಡರ ಕುಟುಂಬದ ಒಗ್ಗಟ್ಟು ಪ್ರದರ್ಶನಕ್ಕೂ ಸಹ ವೇದಿಕೆಯಾದ ಘಟನೆ ಗುರುವಾರ ನಡೆಯಿತು. ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪರ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ , ರೇವಣ್ಣ, ಭವಾನಿ ರೇವಣ್ಣ , ಪ್ರಜ್ವಲ್ ರೇವಣ್ಣ ಒಟ್ಟಾಗಿ ಪ್ರಚಾರ ನಡೆಸಿದ್ದಾರೆ.
ಹಾಸನದಿಂದ ಸ್ವತಃ ಭವಾನಿ ರೇವಣ್ಣ ಕಣಕ್ಕಿಳಿಯುವ ಆಕಾಂಕ್ಷೆ ವ್ಯಕ್ತ ಪಡಿಸಿದ್ದರು. ಇದಕ್ಕೆ ರೇವಣ್ಣ ಸಹ ಬೆಂಬಲ ಸೂಚಿಸಿದ್ದರು. ಆದರೆ ಕುಮಾರಸ್ವಾಮಿ ತಮ್ಮ ಕಾರ್ಯಕರ್ತ ಸ್ವರೂಪ್ ಗೌಡರಿಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಈ ಬಗ್ಗೆ ಸೋದರರಲ್ಲಿ ವೈಮನಸ್ಸು ಮೂಡಿರುವ ಊಹಾಪೋಹಗಳು ಎದ್ದಿದ್ದವು. ಆದರೆ ಇಂದು ಇಡೀ ಕುಟುಂಬವೇ ಸ್ವರೂಪ್ ಪರ ನಿಂತು ತಮ್ಮ ಕುಟುಂಬ ಒಗ್ಗಟ್ಟಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಸ್ವರೂಪ್ ಸಹ ಭಾಷಣಕ್ಕೆ ಮೊದಲು ಭವಾನಿ ರೇವಣ್ಣ ಕಾಲುಮುಟ್ಟಿ ನಮಸ್ಕರಿಸಿದ್ದು ವಿಶೇಷವಾಗಿತ್ತು.