ಬೆಂಗಳೂರು: ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ. ಪದ್ಮನಾಭನಗರದಿಂದ ಬಿಜೆಪಿಯ ಆರ್.ಅಶೋಕ್ ಅವರಿಗೆ ಎದುರಾಳಿಯಾಗಿ ಸಂಸದ ಡಿ.ಕೆ.ಸುರೇಶ್ ಸ್ಪರ್ಧಿಸಲಿದ್ದಾರೆಯೇ? ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಇಬ್ಬರೂ ಸಹ ಕಾದು ನೋಡಿ ಎಂದು ನಿಗೂಢ ಉತ್ತರ ಕೊಡುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿರಿಸಿರುವ ಘಟನೆ ಗುರುವಾರ ನಡೆದಿದೆ.
ಈಗಾಗಲೇ ಪದ್ಮನಾಭನಗರದಿಂದ ಕಾಂಗ್ರೆಸ್ ರಘುನಾಥ್ ನಾಯ್ಡು ಅವರಿಗೆ ಟಿಕೆಟ್ ನೀಡಿದೆ. ಆದರೆ ಕ್ಷೇತ್ರಕ್ಕೆ ಡಿ.ಕೆ.ಸುರೇಶ್ ಸ್ಪರ್ಧಿಸುವುದಾದರೆ ತಾನು ಹಿಂದೆ ಸರಿಯುವುದಾಗಿ ರಘುನಾಥ್ ನಾಯ್ಡು ಹೇಳಿಕೆ ನೀಡಿದ್ದಾರೆ. ಜೊತೆಗೆ ಸಂಸದ ಡಿ.ಕೆ.ಸುರೇಶ್ ಕೂಡ, ದಾಖಲಾತಿಗಳನ್ನು ಸಿದ್ದಪಡಿಸಿಟ್ಟುಕೊಂಡಿರಿ ಎಂದು ಹೈಕಮ್ಯಾಂಡ್ನಿಂದ ಸೂಚನೆ ಬಂದಿದೆ. ಆದರೆ, ಕ್ಷೇತ್ರವನ್ನು ಇನ್ನೂ ಖಚಿತಗೊಳಿಸಿಲ್ಲ ಎಂದು ಬುಧವಾರ ಹೇಳಿಕೆ ನೀಡಿದ್ದರು.
ಈಗಾಗಲೇ ನಾಮಪತ್ರ ಸಲ್ಲಿಸಿರುವ ರಘುನಾಥ್ ನಾಯ್ಡು ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿದೆಯಾದರೂ, ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದೆ. ಇಂದು ಅಮಾವಾಸ್ಯೆ ಮತ್ತು ಸೂರ್ಯಗ್ರಹಣ ಇರುವ ಕಾರಣ ನಾಮಪತ್ರ ಸಲ್ಲಿಕೆ ಪ್ರಮಾಣ ಗಣನೀಯವಾಗಿ ಕುಸಿತಗೊಂಡಿದೆ.
