ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಕೆಟ್ಟ ಹೆಸರು ತರಲು, ಕರಗ ಉತ್ಸವವನ್ನು ವಿಫಲಗೊಳಿಸಲು ಹುನ್ನಾರ ನಡೆದಿತ್ತೇ? ಹೀಗೊಂದು ಆರೋಪವನ್ನು ಸ್ವತಃ ಕರಗ ಶಕ್ತ್ಯಾರಾಧನೆಯ ನರ್ತಕರಾದ ಜ್ಞಾನೇಂದ್ರ ಮಾಡಿದ್ದಾರೆ. ತನ್ನನ್ನು ಕಿಡಿಗೇಡಿಗಳು ಟಾರ್ಗೆಟ್ ಮಾಡಿದ್ದರು. ಉತ್ಸವದ ವೇಳೆ ತನ್ನ ಮೇಲೆ ಪರೋಕ್ಷವಾಗಿ ಹಲ್ಲೆ ನಡೆಸಲಾಯಿತು ಎಂದು ಜ್ಞಾನೇಂದ್ರ ಆರೋಪಿಸಿದ್ದಾರೆ.
ಕರಗದ ಮೇಲೆ ಎರಚುವ ಹೂವಿನಲ್ಲಿ ಕೆಮಿಕಲ್ ಮಿಶ್ರಣ ಮಾಡಲಾಗಿತ್ತು. ಸಾಲದು ಎಂಬಂತೆ ಹೂವಿನೊಂದಿಗೆ ಖಾರದ ಪುಡಿ ಹಾಗೂ ಮತ್ತಿತರ ವಸ್ತುಗಳನ್ನು ಸೇರಿ ಮೈಮೇಲೆ ಎರಚಲಾಯಿತು. ಮೈಪೂರ್ತಿ ಸುಟ್ಟಗಾಯಗಳಾಗಿದೆ ಎಂದು ಜ್ಞಾನೇಂದ್ರ ವಿವರಣೆ ನೀಡಿದ್ದಾರೆ. ಈ ಬಗ್ಗೆ ಅಧಿಕೃತ ಪತ್ರಿಕಾಗೋಷ್ಠಿ ನಡೆಸಿ ಬಳಿಕ ದೂರು ನೀಡುವುದಾಗಿ ಕರಗ ಉತ್ಸವ ಸಮಿತಿ ಹೇಳಿಕೆ ನೀಡಿದೆ.
ಈಗಾಗಲೇ ಕಿಡಿಗೇಡಿಗಳ ಬಗ್ಗೆ ಮಾಹಿತಿ ಕಲೆಹಾಕಿರುವ ಆಡಳಿತ ಮಂಡಳಿ, ಈ ಬಗ್ಗೆ ದೊಡ್ಡದೊಂದು ತಂಡವೇ ಕಾರ್ಯ ನಿರ್ವಹಿಸಿರುವ ಅನುಮಾನವನ್ನು ವ್ಯಕ್ತಪಡಿಸಿದೆ.