ರಾಮನಗರದಲ್ಲಿ ಸಂಚಾರ ನಡೆಸಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದೆಲ್ಲೆಡೆ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಇದೇ ವೇಳೆ ಚನ್ನಪಟ್ಟಣಕ್ಕೆ ಮೋದಿ ಆಗಮನ ವಿಚಾರ ಕುರಿತು ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಾಗಿ ಮೋದಿ ಹೆಸರು ಹೇಳ್ಕೊಂಡು ಚುನಾವಣೆ ಮಾಡ್ತಿದ್ದಾರೆ. ಪ್ರಧಾನಿ ಮೋದಿಯವರ ಮೇಲೆ ನನಗೆ ಅಪಾರ ಗೌರವವಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ವಿರುದ್ಧದ ಅಲೆ ಇದೆ. ಬಿಜೆಪಿಯ ಆಡಳಿತ ನೋಡಿ ಜನ ಬೇಸತ್ತಿದ್ದಾರೆ. ಮೋದಿ ಹೆಸರಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ. ಮಂಡ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ರೈತಸಂಘದವರು ಸೇರಿ ನನ್ನನ್ನು ಸೋಲಿಸಿದ್ರು. ರಾಮನಗರದಲ್ಲೂ ನನ್ನನ್ನು ಸೋಲಿಸಲು ಅದೇ ರೀತಿ ತಂತ್ರಗಾರಿಕೆ ಮಾಡ್ತಿದ್ದಾರೆ. ಆದರೆ ರಾಮನಗರದ ಜನತೆ ಅದಕ್ಕೆ ಮಣೆಹಾಕಲ್ಲ. ಕ್ಷೇತ್ರದ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಚಾರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆಗಮಿಸಲು ಅವರ ಆರೋಗ್ಯ ಅಷ್ಟೊಂದು ಚೆನ್ನಾಗಿಲ್ಲ. ಅವರು ನಿತ್ಯ ರಾಮನಗರ ಪ್ರಚಾರದ ಬಗ್ಗೆ ನನ್ನಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅವರಿಗೂ ರಾಮನಗರದಲ್ಲಿ ಪ್ರಚಾರ ಮಾಡಬೇಕೆಂಬ ಬಯಕೆ ಇದೆ, ಆದರೆ ಆರೋಗ್ಯ ಸಹಕರಿಸುತ್ತಿಲ್ಲ.ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದರು.