ಮಂಡ್ಯ: ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಸ್ವಯಂಘೋಷಿತ ಆಸ್ತಿ ವಿವರವನ್ನು ರಾಜ್ಯಾದ್ಯಂತ ಸುಮಾರು ಐದು ಸಾವಿರ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಈ ಮಾಹಿತಿಯನ್ನು ತೆರೆದಿಟ್ಟಿದ್ದಾರೆ.
ಡಿ.ಕೆ.ಸುರೇಶ್ ಕನಕಪುರದಿಂದ ನಾಮಪತ್ರ ಸಲ್ಲಿಸಿರುವ ಹಿಂದಿನ ಚುನಾವಣಾ ತಂತ್ರದ ಹಿಂದಿನ ಕಾರಣವನ್ನು ವಿವರಿಸಿರುವ ಅವರು ಇದರಲ್ಲಿ ಬಿಜೆಪಿ ಮುಖಂಡರ ಕುತಂತ್ರವೂ ಪಾತ್ರ ವಹಿಸಿದ್ದು, ರಾಜಕೀಯ ಲೆಕ್ಕಾಚಾರದ ಕಾರಣದಿಂದ ಈ ಕೃತ್ಯಕ್ಕೆ ಮುಂದಾಗಿರುವುದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇದು ನಮ್ಮ ಆತುರದ ನಿರ್ಧಾರವಲ್ಲ. ನಮಗೂ ರಾಜಕಾರಣ ಬರುತ್ತದೆ ಎಂದು ತಿಳಿಸುವ ಉದ್ದೇಶದಿಂದ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದು, ಇದರ ಹಿಂದಿನ ಗುಟ್ಟನ್ನು ಬಹಿರಂಗಗೊಳಿಸುವ ಕಾಲ ಬರುತ್ತದೆ ಎಂದು ನುಡಿದರು.
ದ್ವೇಷ ರಾಜಕಾರಣದಿಂದ ರಾಹುಲ್ ಗಾಂಧಿಯ ಮೇಲೆಯೇ ಪ್ರಕರಣ ದಾಖಲಿಸಿರುವವರು ನನ್ನನ್ನು ಬಿಡುತ್ತಾರೆಯೇ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
