ರಾಜ್ಯದಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ಗೆ ಬರಲು ಒಪ್ಪಿಕೊಂಡರೆ ಅಂತಹ ನಾಯಕರನ್ನು ನಾವು ಧಾರಾಳವಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಕುಸ್ತಿ ಜೋರಾಗಿ ನಡೆಯುತ್ತಿದೆ. ನಾವು ಈಗಾಗಲೇ ಶೇಕಡ 75ರಷ್ಟು ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ್ದೇವೆ. ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಶುಭ ಮುಹೂರ್ತದಲ್ಲಿ ಬಿಡುಗಡೆ ಮಾಡುತ್ತೇವೆ. ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಬಗ್ಗೆ ಯಾವುದೇ ಪ್ರಸ್ತಾಪವನ್ನೂ ಮಾಡಿಲ್ಲ. ಆದರೆ, ಒಂದು ವೇಳೆ ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ಗೆ ಬರುವುದಾದರೆ ಅವರನ್ನು ನಾವು ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸೋಮಣ್ಣ ಆಗಲಿ, ಲಕ್ಷ್ಮಣ ಸವದಿ ಆಗಲಿ ಕಾಂಗ್ರೆಸ್ ಗೆ ಸೇರುತ್ತಾರೆ ಎಂದು ಹೇಳಿಲ್ಲ. ಕೆಲವು ನಾಯಕರು ಕಾಂಗ್ರೆಸ್ಗೆ ಸೇರುವುದಾಗಿ ಬಂದಿದ್ರು, ಆದರೆ, ನಮ್ಮಲ್ಲೂ ಸ್ಥಾನಮಾನ ಬೇಕಲ್ಲ, ಖಾಲಿ ಕುರ್ಚಿ ಇದ್ರೆ ಕೂರಿಸುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.
ಈಶ್ವರಪ್ಪ ನಿವೃತ್ತಿ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆಶಿ, ಈಶ್ವರಪ್ಪ ಅವರು ನನ್ನ ವಿರುದ್ಧವೂ ಸ್ಪರ್ಧಿಸಿದ್ದರು, ನಿವೃತ್ತಿ ಘೋಷಿಸಿದ್ದಾರೆ, ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
