ಮಂಡ್ಯ: ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸದ ಹಿನ್ನೆಲೆಯಲ್ಲಿ ನಾನೂ ಸಹ ಸ್ಪರ್ಧೆ ನೀಡುತ್ತಿಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ. ಗುರುವಾರ ಮಾಧ್ಯಮಗಳೊಂದಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯದಲ್ಲಿ ಕುಮಾರಸ್ವಾಮಿ ಎದುರಾಳಿಯಾಗಿ ನಿಲ್ಲಲ್ಲು ನನಗೆ ಬಿಜೆಪಿ ಆಮಂತ್ರಿಸಿತ್ತು. ನಾನೂ ಸಹ ಅದಕ್ಕೆ ಸಿದ್ದವಾಗಿದ್ದೆ ಎಂದು ಹೇಳಿದರು.
ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸುಮಲತಾ, ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್ ಸರ್ವನಾಶವಾಗಿದೆ. ಸೂಟ್ಕೇಸ್ ಪಕ್ಷ ಎಂದು ಸ್ವಂತ ಪಕ್ಷದವರೇ ಆಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಟಿಕೆಟ್ ಕೋಟಿ ಕೋಟಿ ರೂಪಾಯಿಗೆ ಸೇಲ್ ಆಗುತ್ತೆ ಎಂದು ಅವರ ಪಕ್ಷದವರೇ ಬಹಿರಂಗ ಪಡಿಸಿದ್ದಾರೆ. ಯಾವುದೇ ರೈತ ಮಹಿಳೆಯನ್ನೋ ರೈತರ ಮಗನನ್ನೋ ಜೆಡಿಎಸ್ ಚುನಾವಣೆಗೆ ನಿಲ್ಲಿಸಿಲ್ಲ ಎಂದು ಸುಮಲತಾ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿಯವರನ್ನು ಚುನಾವಣೆಯಲ್ಲಿ ಎದುರಿಸಲು ನಮ್ಮಲ್ಲಿ ಸಮರ್ಥ ಅಭ್ಯರ್ಥಿ ಇದ್ದರು. ಆದರೂ ಬಿಜೆಪಿ ನನ್ನನ್ನೇ ಕಣಕ್ಕಿಳಿಸಲು ಚಿಂತನೆ ನಡೆಸಿತ್ತು. ಆದರೆ ಕುಮಾರಸ್ವಾಮಿ ಸ್ಪರ್ಧಿಸದ ಕಾರಣ ನಾನೂ ಸ್ಪರ್ಧಿಸುತ್ತಿಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.
