Tuesday, August 4, 2026
HomeUncategorizedವಿಜಯಾನಂದಗೆ ಸಚಿವ ಹಾಗೂ ವೀಣಾ ಅವರಿಗೆ ನಿಗಮ ಅಧ್ಯಕ್ಷ ನೀಡಲು ಡಾ. ಎಸ್. ಸಂಗಮೇಶ್ ...

ವಿಜಯಾನಂದಗೆ ಸಚಿವ ಹಾಗೂ ವೀಣಾ ಅವರಿಗೆ ನಿಗಮ ಅಧ್ಯಕ್ಷ ನೀಡಲು ಡಾ. ಎಸ್. ಸಂಗಮೇಶ್ ಆಗ್ರಹ…!!!

ಬೆಂಗಳೂರು,ಮೇ.30: ಉತ್ತರ ಕರ್ನಾಟಕದ ಧ್ವನಿಯಾಗಿ, ಯುವ ಜನಾಂಗ ಹಾಗೂ ಜನ ಸಾಮಾನ್ಯರ ಸಮಸ್ಯೆಗಳ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ “ಉತ್ತರ ಕರ್ನಾಟಕದ ಹುಲಿ” ಎಂದೇ ಜನಪ್ರಿಯರಾಗಿರುವ ವಿಜಯನಂದ ಕಾಶಪ್ಪನವರ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಹಾಗೂ ಸಮಾಜಮುಖಿ ಕಾರ್ಯಗಳು, ಮಹಿಳಾ ಸಬಲೀಕರಣ ಮತ್ತು ಜನಪರ ಆಡಳಿತದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ವೀಣಾ ಕಾಶಪ್ಪನವರ ಅವರಿಗೆ ರಾಜ್ಯದ ಪ್ರಮುಖ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ಯುವ ಸಮೂಹದ ರಾಜ್ಯಾಧ್ಯಕ್ಷರಾದ ಡಾ. ಎಸ್. ಸಂಗಮೇಶ್ ಆಗ್ರಹಿಸಿದ್ದಾರೆ.

ಪ್ರಾದೇಶಿಕ ಸಮತೋಲನ ಆಧಾರದ ಮೇಲೆ ಸಚಿವ ಸಂಪುಟದ ಪುನಾರಚನೆಯಾಗಬೇಕು. ಉತ್ತರ ಕರ್ನಾಟಕದ ಪ್ರಭಾವಿ ಜನನಾಯಕರಾದ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ನೀಡುವುದು ಅತ್ಯಂತ ಸೂಕ್ತ ಹಾಗೂ ನ್ಯಾಯಸಮ್ಮತವಾಗಿದೆ. ಇದರಿಂದ ವೀರಶೈವ-ಲಿಂಗಾಯತ ಸಮುದಾಯದ ಪ್ರಾತಿನಿಧ್ಯ ಮತ್ತಷ್ಟು ಬಲಗೊಳ್ಳುವ ಜೊತೆಗೆ ಉತ್ತರ ಕರ್ನಾಟಕದ ಜನರ ಆಶೋತ್ತರಗಳಿಗೆ ಗೌರವ ದೊರೆಯಲಿದೆ ಎಂದಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ವಿಜಯನಂದ ಕಾಶಪ್ಪನವರ ಅವರು ಯುವ ಜನಾಂಗದ ಕಣ್ಮಣಿಯಾಗಿದ್ದು, ಅವರ ಕುಟುಂಬ ಹಲವು ದಶಕಗಳಿಂದ ಕಾಂಗ್ರೆಸ್ ಗೆ ನಿಷ್ಠೆ ಹೊಂದಿದೆ. ಪಕ್ಷ ಸಂಘಟನೆ, ಜನಪರ ಹೋರಾಟಗಳು ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಅವರು ಸಲ್ಲಿಸಿರುವ ಸೇವೆ ಅಪಾರ. ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಧಾನ ಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸುವ ಮೂಲಕ ಇತಿಹಾಸ ನಿರ್ಮಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ ಎಂದು ಡಾ. ಎಸ್. ಸಂಗಮೇಶ್ ಹೇಳಿದ್ದಾರೆ.

ವೀಣಾ ಕಾಶಪ್ಪನವರ ಅವರು ಮಹಿಳಾ ಸಬಲೀಕರಣ, ಸಾಮಾಜಿಕ ಸೇವೆ, ಜನಸಂಪರ್ಕ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿ ಹಾಗೂ ಮಹಿಳಾ ನಾಯಕತ್ವದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆ ಗಮನಾರ್ಹವಾಗಿದೆ. ಅವರ ಸೇವೆ ಮತ್ತು ನಾಯಕತ್ವವನ್ನು ಗುರುತಿಸಿ ರಾಜ್ಯದ ಪ್ರಮುಖ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದಿದ್ದಾರೆ

ಹೆಚ್ಚಿನ ಸುದ್ದಿ