ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಅಲ್ಲಲ್ಲಿ ಬಂಡಾಯದ ದನಿಗಳು ಏಳತೊಡಗಿವೆ. ಅನಿರೀಕ್ಷಿತವೆಂಬಂತೆ ಕೆಎಸ್ ಈಶ್ವರಪ್ಪರನ್ನೂ ಮೂಲೆಗುಂಪು ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಶಿವಮೊಗ್ಗ ಮಹಾನಗರ ಪಾಲಿಕೆ ಬಿಜೆಪಿಯ 19 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಮೇಯರ್, ಉಪಮೇಯರ್ ಸೇರಿ 19 ಸದಸ್ಯರು ರಾಜೀನಾಮೆ ನೀಡಿದ್ದು, ಬೆಂಗಳೂರಿಗೆ ತೆರಳಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.
ಈಶ್ವರಪ್ಪ ಅವರೇ ಪಾಲಿಕೆಯಲ್ಲಿ ಬಿಜೆಪಿ ಸಾಧನೆಗೆ ಕಾರಣ. ಅವರಿಗೆ ಟಿಕೆಟ್ ಕೊಡದಿದ್ದರೆ ನಾವು ರಾಜಿನಾಮೆ ನೀಡುತ್ತೇವೆ. ಪಕ್ಷಕ್ಕೆ ಸಾಮೂಹಿಕ ರಾಜಿನಾಮಗೆ ನೀಡಲು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷದ ಪರವಾಗಿ ಯಾವುದೇ ಕೆಲಸ ಮಾಡಲ್ಲ. ಚುನಾವಣೆ ವೇಳೆಯೂ ಸ್ಪಂದಿಸಲ್ಲ ಎಂದು ಶಿವಮೊಗ್ಗ ಪಾಲಿಕೆ ಮೇಯರ್ ಶಿವಕುಮಾರ್ ತಿಳಿಸಿದ್ದಾರೆ.