ಚುನಾವಣೆ ಬಂತೆಂದು ವೋಟರ್ ಐಡಿ ಕಾರ್ಡ್ ತೆಗೆದುಕೊಳ್ಳಲು ಬರೋಬ್ಬರಿ 9 ತಿಂಗಳ ನಂತರ ಮನೆಗೆ ಬಂದ ಪತಿಯನ್ನು ಪತ್ನಿ ಕೂಡಿ ಹಾಕಿ ಬೀಗ ಹಾಕಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ.
ತಾಲೂಕಿನ ಏಟಿಗಡ್ಡಪಲ್ಲಯ ಗಂಗರಾಜೇಶ್ವರಿ ಎಂಬಾಕೆ ತನ್ನ ಪತಿ ಮಹೇಶ್ ಎಂಬಾತನನ್ನು ಕೂಡಿ ಹಾಕಿದ್ದಾಳೆ.
ಮಹೇಶ್ ಕೆಎಸ್ಆರ್ಟಿಸಿ ಉದ್ಯೋಗಿಯಾಗಿದ್ದು, ಮದುವೆಯಾಗಿ 20 ವರ್ಷಗಳು ಕಳೆದಿವೆ. ಆದರೆ ಇಬ್ಬರ ನಡುವೆ ಅನುಮಾನ ಪಿಶಾಚಿ ಕೂತಿದ್ದು, ಒಬ್ಬರಿಗೊಬ್ಬರು ವಿವಾಹೇತರ ಸಂಬಂಧದ ಬಗ್ಗೆ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.
ಹೆಂಡತಿಯೊಂದಿಗಿನ ಮನಸ್ತಾಪದಿಂದ ಕಳೆದ ಕೆಲವು ತಿಂಗಳುಗಳಿಂದ ಪತ್ನಿ ಇರುವ ಮನೆಗೆ ಹೋಗದೆ ಚಿಕ್ಕಬಳ್ಳಾಪುರದಲ್ಲಿ ಬೇರೊಂದು ಮನೆ ಮಾಡಿಕೊಂಡು ವಾಸವಿದ್ದ ಎನ್ನಲಾಗಿದೆ. ಪತ್ನಿ ಗಂಗರಾಜೇಶ್ವರಿ ಆರೋಪದ ಪ್ರಕಾರ ಮಹೇಶ್ ಇನ್ನೊಬ್ಬಳ ಜೊತೆ ಸಂಸಾರ ಮಾಡ್ತಿದ್ದಾನೆ.
ಇದೀಗ 9 ತಿಂಗಳ ನಂತರ ಗಂಡ ವೋಟರ್ ಐಡಿಗೆಂದು ಮನೆಗೆ ಬಂದಿದ್ದಾನೆ. ಗಂಡ ಮನೆಗೆ ಬರುತ್ತಿದ್ದಂತೆ ಆತನನ್ನು ರೂಮ್ನಲ್ಲಿ ಕೂಡಿ ಹಾಕಿ ಪತ್ನಿ ಗಲಾಟೆ ಮಾಡಿದ್ದಾಳೆ. ಬಳಿಕ ಪೊಲೀಸರು ಆಗಮಿಸಿ ಮಹೇಶ್ನನ್ನು ವಿಚಾರಣೆ ನಡೆಸಿದ್ದಾರೆ.
ಪತ್ನಿ ಆರೋಪವನ್ನು ನಿರಾಕರಿಸಿರುವ ಮಹೇಶ್, ನನ್ನ ಪತ್ನಿಯೇ ಸರಿ ಇಲ್ಲ, ನನ್ನ ನೆಮ್ಮದಿ ಹಾಳಾಗಿದೆ. ಡೈವೋರ್ಸ್ ಕೂಡಾ ಕೇಳಿದ್ದೇನೆ, ಹಾಗಾಗಿ ಪ್ರತ್ಯೇಕವಾಗಿ ವಾಸವಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
