ಯಾದಗಿರಿ: ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ನಡೆದಿದೆ.
ಯಾದಗಿರಿಯಿಂದ ಕಲಬುರಗಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ರಾತ್ರಿ 12:30ರ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆಯ ಮಧ್ಯೆ ಇರುವ ಗುಂಡಿಯಲ್ಲಿ ಕಾರು ಹಾದುಹೋದ ಕಾರಣ ನಿಯಂತ್ರಣ ತಪ್ಪಿ ಕಾರು ಬಿದ್ದಿದೆ. ಚಾಲಕ ನಿದ್ರೆಯ ಮಂಪರಿನಲ್ಲಿ ವಾಹನ ಚಲಾಯಿಸಿದ್ದಕ್ಕೆ ಹೀಗೆ ಆಗಿದೆ ಎನ್ನಲಾಗಿದೆ. ಕಾರು ಬಿದ್ದ ರಭಸಕ್ಕೆ ಚಿಂಚನಸೂರ್ ತಲೆ ಹಾಗೂ ಕಾಲಿಗೆ ಗಾಯಗಳಾಗಿವೆ.
ಸ್ಥಳೀಯರ ಸಹಕಾರದಿಂದ ಚಿಂಚನಸೂರ್ ಅವರನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಮತ್ತು ಗನ್ಮ್ಯಾನ್ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗುರುಮಿಠಕಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರ್ ಕಣಕ್ಕಿಳಿದಿದ್ದಾರೆ. ಅಪಘಾತದಿಂದ ಆಸ್ಪತ್ರೆ ಸೇರಿರುವ ಚಿಂಚನಸೂರ್ ನಾಮಪತ್ರ ಸಲ್ಲಿಕೆಯೂ ಮುಂದೂಡಿಕೆಯಾಗಿದೆ.
