ನವದೆಹಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಪುಲ್ವಾಮಾ ದಾಳಿಯನ್ನು ನಡೆಸಲಾಗಿತ್ತೇ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಪ್ರಶ್ನಿಸಿದ್ದು, ಕೇಂದ್ರ ಸರಕಾರದ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಪುಲ್ವಾಮಾ, ಭಯೋತ್ಪಾದಕ ಘಟನೆಗೆ ಕಾರಣವಾದ ಲೋಪಗಳ ಬಗ್ಗೆ ಮಾತನಾಡದಂತೆ ಪ್ರಧಾನಿ ಮೋದಿ ಹೇಳಿದ್ದರು ಎಂದು ಹೇಳಿಕೆ ನೀಡಿದ ನಂತರ ರಾವತ್ ಈ ಆರೋಪ ಮಾಡಿದ್ದಾರೆ.
ಪುಲ್ವಾಮಾ ದಾಳಿಯ ನಂತರ ಪ್ರತಿಪಕ್ಷಗಳು ಈ ಪ್ರಶ್ನೆಗಳನ್ನು ಕೇಳಿದವು. ಆದರೆ ಆಡಳಿತಾರೂಢ ಬಿಜೆಪಿಯು ‘ದೇಶದ್ರೋಹಿಗಳು’ ಮತ್ತು ‘ಪಾಕಿಸ್ತಾನದ ಪರ ಇರುವರು’ ಎಂದು ಹೇಳುವ ಮೂಲಕ ವಿಪಕ್ಷಗಳನ್ನು ಮೌನವಾಗಿಸಿತು ಎಂದವರು ಹೇಳಿದರು.
