ಬೆಂಗಳೂರು: ನಾನು ಕಟ್ಟಿದ ಪಕ್ಷವೇ ನನ್ನನ್ನು ಹೊರಹಾಕಿಬಿಡ್ತು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದಕ್ಕೆ ನಾನು ಪಕ್ಷ ಬಿಟ್ಟುಬರಬೇಕಾಯ್ತು. ಇದು ಬಿಜೆಪಿ ತೊರೆದ ಜಗದೀಶ್ ಶೆಟ್ಟರ್ ನೋವಿನ ನುಡಿ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಬಿಜೆಪಿ ವಿರುದ್ಧ ಬೇಸರದ ಮಾತುಗಳನ್ನಾಡಿದ್ದಾರೆ. ಅಧಿಕಾರದ ಮೇಲೆ ಆಸೆ ಇಟ್ಟು ನಾನು ರಾಜಕಾರಣಕ್ಕೆ ಬಂದಿಲ್ಲ.. ನನಗೆ ಯಾವುದೇ ಪದವಿ ಬೇಕಾಗಿಲ್ಲ. ಆದ್ರೆ ಬಿಜೆಪಿ ನಾಯಕರು ನಡೆದುಕೊಂಡ ರೀತಿ ನನಗೆ ಬೇಸರ ತಂದಿದೆ ಎಂದ್ರು.
ಕಾರಣ ನೀಡದೇ ಏಕಾಏಕಿ ಟಿಕೆಟ್ ನೀಡದೇ ನನ್ನ ಗೌರವಕ್ಕೆ ಧಕ್ಕೆ ತಂದಿದ್ದಲ್ಲದೇ ನನ್ನ ಕಾರ್ಯಕರ್ತರಿಗೆ ನನ್ನ ಬೆಂಬಲಿಗರಿಗೂ ತೀವ್ರ ಅಪಮಾನವಾಗಿದೆ. ಎರಡು ವರ್ಷದಿಂದ ಸರ್ಕಾರಕ್ಕೆ ತೊಂದರೆ ಆಗದಂತೆ ನಡೆದುಕೊಂಡೆ, ಆದರೂ ಈ ರೀತಿ ನಡೆಸಿಕೊಂಡಿರುವುದು ಸರಿಯಲ್ಲ. ನಾನು ಬಿಎಸ್ವೈ ಜೊತೆ ಪಕ್ಷ ಕಟ್ಟಿದ್ದೇನೆ. ಬಿಎಸ್ವೈ ಬಳಿಕ ಲಿಂಗಾಯತ ಸಮುದಾಯದ ಹಿರಿಯ ನಾಯಕ. ಆದರೂ ಪಕ್ಷ ನಡೆದು ನನ್ನನ್ನು ಹೀನಾಯವಾಗಿ ನಡೆಸಿಕೊಂಡಿದೆ.
ಈ ಚುನಾವಣೆಯಲ್ಲಿ ಗೆದ್ದ ಮೇಳೆ 6 ತಿಂಗಳು ಶಾಸಕರಾಗಿ ಇರುತ್ತೇನೆ, ನಂತರ ರಾಜಿನಾಮೆ ನೀಡುತ್ತೇನೆ ಎಂದಿದ್ದೆ ಅದಕ್ಕೂ ಅವಕಾಶ ಕೊಟ್ಟಿಲ್ಲ. ಇನ್ನು ಮುಂದೆ ಅಧಿಕಾರ ಬೇಡ, ಗೌರವಯುತವಾಗಿ ರಾಜಕೀಯದಿಂದ ಹೊರಗೆ ಕಳಿಸಿ ಎಂದು ಕೇಳಿದೆ. ಅಷ್ಟು ಕೂಡಾ ಮಾಡಿಲ್ಲ. ದೆಹಲಿಗೆ ಕರೆದು ಬೇರೆ ವ್ಯವಸ್ಥೆ ಮಾಡಿದ್ದೀನಿ ಎಂದು ಹೇಳಿದ್ದರೆ, ಖುಷಿಯಿಂದ ಬಿಟ್ಟು ಕೊಡ್ತಿದೆ.
ಬಿಜೆಪಿ ಕೆಲವರ ಕೈವಶವಾಗಿದೆ. ಅಮಿತ್ ಶಾ. ನಡ್ಡಾರವರ ಬಗ್ಗೆ ಗೌರವ ಇದೆ. ಆದರೆ ಕೆಲವರು ಕರ್ನಾಟಕ ಬಿಜೆಪಿ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದಾರೆ. ಆದ್ದರಿಂದಲೇ ಈ ಎಲ್ಲಾ ಬೆಳವಣಿಗೆಗಳು ಆಗಿವೆ. ನನ್ನ ಸ್ವಾಭಿಮಾನಕ್ಕೆ ತೀವ್ರ ಪೆಟ್ಟಾದ ಕಾರಣ ನಾನು ಬಿಜೆಪಿ ಮನೆ ತೊರೆದಿದ್ದೇನೆ ಎಂದು ಬಿಜೆಪಿ ವಿರುದ್ಧ ಶೆಟ್ಟರ್ ಬೇಸರದ ಮಾತುಗಳನ್ನಾಡಿದ್ರು.
ನಾನು ಸ್ವಾಭಿಮಾನಕ್ಕಾಗಿ ಬಿಜೆಪಿ ಬಿಟ್ಟು ಸೇರಿದ್ದೇನೆ. ಇಂದು ಕಾಂಗ್ರೆಸ್ ಹಾಗೂ ನನ್ನ ರಾಜಕೀಯ ಜೀವನದಲ್ಲೇ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಇಡೀ ರಾಜ್ಯದ ಲಿಂಗಾಯತರು ನನಗೆ ಕಾಲ್ ಮಾಡಿ, ಏಕೆ ಅನ್ಯಾಯ ಆಯಿತು ಎಂದು ಕೇಳಿದ್ದಾರೆ. ಪ್ರೀತಿ ವಿಶ್ವಾಸಕ್ಕೆ ಧನ್ಯವಾದ. ಹುಬ್ಬಳ್ಳಿ ಜನರಿಂದ ಜಗದೀಶ್ ಶೆಟ್ಟರ್ ಬೆಳೆದಿದ್ದಾನೆ. ಮುಂದೆಯೂ ಜನಸೇವೆಯಲ್ಲೇ ಮುಂದುವರೆಯುತ್ತೇನೆ ಎಂದ್ರು
