ಕೊಲ್ಕತ್ತಾ: ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳದ ಇಬ್ಬರು ಯೋಧರ ಕುಟುಂಬಗಳು ಪುಲ್ವಾಮಾ ದಾಳಿಯ ಬಗ್ಗೆ ಇತ್ತೀಚಿಗೆ ಸತ್ಯಪಾಲ್ ಮಲಿಕ್ ನೀಡಿದ್ದ ಹೇಳಿಕೆಯ ಸತ್ಯಾಂಶ ಹೊರಬರಬೇಕು ಎಂದು ಆಗ್ರಹಿಸಿದೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್, ಪುಲ್ವಾಮಾ ದಾಳಿಯ ಸಂದರ್ಭ ಯೋಧರನ್ನು ಸಾಗಿಸುವುದಕ್ಕಾಗಿ ವಿಮಾನವನ್ನು ಕೇಳಿತ್ತಾದರೂ ಗೃಹ ಇಲಾಖೆ ಅದಕ್ಕೆ ನಿರಾಕರಿಸಿತ್ತು ಎಂದಿದ್ದರು ಮತ್ತು ಪುಲ್ವಾಮಾ ದಾಳಿಯಲ್ಲಿ ಕೇಂದ್ರ ಸರಕಾರದ ವೈಫಲ್ಯಗಳ ಬಗ್ಗೆ ಮಾತನಾಡದಂತೆ ಪ್ರಧಾನಿ ಮೋದಿ ನನಗೆ ಸೂಚಿಸಿದ್ದರು ಎಂದು ಸತ್ಯಪಾಲ್ ಮಲಿಕ್ ಹೇಳಿದ್ದರು.
ಇದೀಗ ಈ ಹೇಳಿಕೆಯ ನಂತರ ಇಬ್ಬರು ಹುತಾತ್ಮ ಯೋಧರಾದ ಸುದೀಪ್ ಬಿಸ್ವಾಸ್ ಮತ್ತು ಬಬ್ಲು ಶಾಂತಾ ಅವರ ಕುಟುಂಬಸ್ಥರು ಪುಲ್ವಾಮಾ ದಾಳಿಯ ಹಿಂದಿನ ಸತ್ಯಗಳು ಹೊರ ಬರಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ನಡೆದು ನಾಲ್ಕು ವರ್ಷಗಳು ಕಳೆದರೂ ಸೈನಿಕರಿಗೆ ವಿಮಾನವನ್ನು ಯಾಕೆ ನೀಡಲಿಲ್ಲ ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
