ಚಾಮರಾಜನಗರ: ಚುನಾವಣೆ ತರಬೇತಿಯಲ್ಲಿದ್ದ ನೌಕರ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಸರ್ಕಾರಿ ನೌಕರರಿಗೆ ಚುನಾವಣೆ ತರಬೇತಿ ನೀಡಲಾಗುತ್ತಿದೆ. ಈ ರೀತಿ ಚುನಾವಣೆ ತರಬೇತಿಯಲ್ಲಿದ್ದ ನೌಕರ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಜಗದೀಶ್ (40) ಮೃತ ನೌಕರ.
ಹನೂರಿನ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಿದ್ದ ತರಬೇತಿ ಆರಂಭವಾಗುತ್ತಿದ್ದಂತೆ ಎದೆನೋವಿನಿಂದ ಕುಸಿದು ಬಿದ್ದ ಜಗದೀಶ್, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಉಸಿರು ನಿಲ್ಲಿಸಿದ್ದಾರೆ. ಜಗದೀಶ್ ತಾಲೂಕು ಖಜಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.