Tuesday, July 8, 2025
Homeಚುನಾವಣೆ 2023ಡಿಕೆಶಿ, ಸಿದ್ದರಾಮಯ್ಯ ಮಾತ್ರವಲ್ಲ ಸಿಎಂ ಅಭ್ಯರ್ಥಿಗಳು: ಎಂಬಿ ಪಾಟೀಲ್‌ ಅಚ್ಚರಿಯ ಹೇಳಿಕೆ

ಡಿಕೆಶಿ, ಸಿದ್ದರಾಮಯ್ಯ ಮಾತ್ರವಲ್ಲ ಸಿಎಂ ಅಭ್ಯರ್ಥಿಗಳು: ಎಂಬಿ ಪಾಟೀಲ್‌ ಅಚ್ಚರಿಯ ಹೇಳಿಕೆ

  ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಮಾತ್ರವಲ್ಲ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಎಂದು ಕಾಂಗ್ರೆಸ್‌ ನಾಯಕ ಎಂ ಬಿ ಪಾಟೀಲ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ ನನ್ನನ್ನೂ ಸೇರಿದಂತೆ ಹಲವು ಸಮರ್ಥ ಆಕಾಂಕ್ಷಿಗಳಿದ್ದಾರೆ. ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ ಕೂಡಾ ಸಂಭಾವ್ಯ ಸಿಎಂ ಅಭ್ಯರ್ಥಿಗಳು ಎಂದು ಪಾಟೀಲ್‌ ಹೇಳಿದ್ದಾರೆ.

“ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ರಾಜ್ಯದಲ್ಲಿ ನಮ್ಮ ಪಕ್ಷದ ಉನ್ನತ ನಾಯಕರು. ನಾನು, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಬೈರೇಗೌಡ ಅವರು ನಂತರದ ಸಾಲಿನ ರಾಜ್ಯ ನಾಯಕರು” ಎಂದು ಪಾಟೀಲ್ ಹೇಳಿದ್ದಾರೆ.

“ಸಿಎಂ ಆಗುವ ಆಸೆಯನ್ನು ಯಾರು ಬೇಕಾದರೂ ವ್ಯಕ್ತಪಡಿಸಬಹುದು. ಆದರೆ, ಅಂತಿಮವಾಗಿ ಶಾಸಕರ ಬೆಂಬಲ ಪಡೆಯಬೇಕು. ಶಾಸಕರು ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡುತ್ತಾರೆ. ಇದನ್ನು ಅನುಸರಿಸಿ, ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಇದು ಕಾಂಗ್ರೆಸ್ಸಿನ ಪರಂಪರೆ” ಎಂದು ಪಾಟೀಲ್ ಹೇಳಿದ್ದಾರೆ.

ಈ ಬಾರಿಯ ಚುನಾವಣೆಯನ್ನು ಸಾಮೂಹಿಕ ನೇತೃತ್ವದಲ್ಲಿ ಎದುರಿಸಲಾಗುತ್ತದೆ, ಮುಖ್ಯಮಂತ್ರಿಯನ್ನು ನಂತರ ಶಾಸಕರು ಆಯ್ಕೆ ಮಾಡುತ್ತಾರೆ ಎಂದು ಪಾಟೀಲ್‌ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ