ಹೊಸದಿಲ್ಲಿ: ವಿಪಕ್ಷಗಳ ಒಗ್ಗಟ್ಟಿನ ಹೆಸರಿನಲ್ಲಿ ಶರದ್ ಪವಾರ್ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ಒಂದು ದಿನದ ನಂತರ ಎನ್ಸಿಪಿ ಮುಂದಿನ ತಿಂಗಳ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಘೋಷಿಸಿದೆ.
ಮೇ 10ರಂದು ನಡೆಯಲಿರುವ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾ ದಳಗಳ ತ್ರಿಕೋನ ಸ್ಪರ್ಧೆ ಇರುವ ಕಡೆಗಳಲ್ಲಿ ಎನ್ಸಿಪಿ 40-45ರಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲು ಯೋಚಿಸಿದೆ.
ವಿರೋಧ ಪಕ್ಷಗಳ ಏಕತೆಗೆ ಸ್ವಲ್ಪ ಮಟ್ಟಿನ ಹೊಡೆತ ನೀಡುವ ಈ ನಿರ್ಧಾರ ಇತ್ತೀಚೆಗೆ ಎನ್ಸಿಪಿ ಕಳೆದುಕೊಂಡ ರಾಷ್ಟ್ರೀಯ ಪಕ್ಷ ಸ್ಥಾನಮಾನವನ್ನು ಹಿಂಪಡೆಯುವ ಯತ್ನದ ಭಾಗ ಎನ್ನಲಾಗಿದೆ.
“ನಮ್ಮ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಮರಳಿ ಪಡೆಯಲು ನಾವು ಈ ಹೆಜ್ಜೆ ಇಡಬೇಕಾಗಿದೆ” ಎಂದು ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.
ಕರ್ನಾಟಕ ಚುನಾವಣೆಗೆ ಚುನಾವಣಾ ಆಯೋಗವು ಎನ್ಸಿಪಿಗೆ ಗಡಿಯಾರ ಚಿಹ್ನೆಯನ್ನು ನೀಡಿದೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ಪ್ರದೇಶದಲ್ಲಿ ಎನ್ಸಿಪಿಯು ಮಹಾರಾಷ್ಟ್ರ ಏಕೀಕರಣ ಸಮಿತಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.