Friday, April 17, 2026
Homeಟಾಪ್ ನ್ಯೂಸ್‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿನ ಬೊಮ್ಮ-ಬೆಳ್ಳಿ ಜೊತೆ ಆತ್ಮೀಯತೆಯಿಂದ ಬೆರೆತ ಮೋದಿ

‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿನ ಬೊಮ್ಮ-ಬೆಳ್ಳಿ ಜೊತೆ ಆತ್ಮೀಯತೆಯಿಂದ ಬೆರೆತ ಮೋದಿ

ಗುಂಡ್ಲುಪೇಟೆ: ಮೈಸೂರು, ಬಂಡೀಪುರ ಪ್ರವಾಸದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿರುವ ಕಾವಾಡಿ ದಂಪತಿ, ಬೊಮ್ಮ-ಬೆಳ್ಳಿ ಅವರನ್ನು ಭೇಟಿ ಮಾಡಿದರು.

ಕಾವಾಡಿ ದಂಪತಿ, ಬೊಮ್ಮ-ಬೆಳ್ಳಿ ನೆಲೆಸಿರುವ ನೆರೆಯ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಬೆಳಗ್ಗೆ 10.30ಕ್ಕೆ ತಲುಪಿದ ಅವರು, ಶಿಬಿರದಲ್ಲಿರುವ ಆನೆಗಳನ್ನು ವೀಕ್ಷಿಸಿ ಅವುಗಳೊಂದಿಗೆ ಬೆರೆತರು. ಕಾವಾಡಿ ದಂಪತಿ, ಬೊಮ್ಮ-ಬೆಳ್ಳಿ ಅವರನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ಇದೇ ವೇಳೆ ರಾಣಿ ಎಂಬ ಹೆಸರಿನ ಆನೆಗೆ ಕಬ್ಬು ಕೊಟ್ಟು ಸೊಂಡಿಲು ಸವರಿದರು.

ಬೆಳ್ಳಿ -ಬೊಮ್ಮ ಕಾವಾಡಿ ದಂಪತಿ ಆನೆ ಮರಿಗಳನ್ನು ಸಲಹುವ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ‘ದೆಹಲಿಗೆ ಬರುವಂತೆ ಹೇಳಿದ್ದರೂ ಯಾಕೆ ಬರಲಿಲ್ಲ’ ಎಂದೂ ಪ್ರಶ್ನಿಸಿದರು ಎಂದು ತಿಳಿದು ಬಂದಿದೆ. ಸಾಕ್ಷ್ಯಚಿತ್ರದಲ್ಲಿ ಬರುವ ರಘು ಮತ್ತು ಅಮ್ಮು ಹೆಸರಿನ ಆನೆ ಮರಿಗಳಿಗೆ ಕಬ್ಬು ಕೊಟ್ಟು ಮೋದಿ ಸಂತಸಪಟ್ಟರು.

ಈ ಕುರಿತು ಮೋದಿ ಟ್ವೀಟ್ ಮಾಡಿದ್ದು, ಬೊಮ್ಮ ಮತ್ತು ಬೆಳ್ಳಿ, ರಘು ಮತ್ತು ಬೊಮ್ಮಿ ಭೇಟಿಯಾಗಿದ್ದು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಆನೆ ಪಾಲಕರಾದ ಕಿರುಮಾರನ್, ಕುಳ್ಳನ್ ಮತ್ತು ದೇವನ್ ಎಂಬುವವರ ಜೊತೆಗೆ ಮಾತನಾಡಿ, ಆನೆಗಳನ್ನು ಪಾಲನೆ ಮಾಡುವ ಬಗ್ಗೆ ಮಾಹಿತಿ ಪಡೆದರು. ಬಳಿಕ, ಈ ಹಿಂದೆ ತೆಪ್ಪಕಾಡು ಭಾಗದಲ್ಲಿ ಹುಲಿಯನ್ನು ಸೆರೆ ಹಿಡಿದ ಸಿಬ್ಬಂದಿ ಜೊತೆ ಮಾತನಾಡಿ, ಅವರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕೈಯನ್ನೂ ಕೈಕುಲುಕಿದರು.

ಹೆಚ್ಚಿನ ಸುದ್ದಿ