ಉತ್ತರ ಕನ್ನಡ: ಪಕ್ಷ ಕಟ್ಟಿದವರಿಗೆ ಬಿಜೆಪಿ ಅನ್ಯಾಯ ಮಾಡಬಾರದಿತ್ತು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೊಡದೇ ಇರುವುದು ಸರಿಯಲ್ಲ. ಅವರು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಾರೆ ಎಂದರೆ ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶೆಟ್ಟರ್ ಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
ಹಳಿಯಾಳದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನನಗೆ ಕ್ಷೇತ್ರವೇ ಇಲ್ಲ ಎಂದು ಈಶ್ವರಪ್ಪ ಈ ಹಿಂದೆ ಟೀಕಿಸಿದ್ದರು. ಆದರೆ ಅದೇ ಈಶ್ವರಪ್ಪ ಅವರಿಗೆ ಈಗ ಟಿಕೆಟ್ ಇಲ್ಲದಂತಾಗಿದೆ. ನನಗೆ ರಾಜ್ಯದ ಎಲ್ಲಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ ಎಂದು ಕಾಲೆಳೆದರು. ಓರ್ವ ಹಿರಿಯ ನಾಯಕ, ಮಾಜಿ ಡಿಸಿಎಂ ಈಶ್ವರಪ್ಪ ಅವರಿಗೆ ಪಕ್ಷ ಹೀಗೆ ಮಾಡಬಾರದಿತ್ತು. ಈಶ್ವರಪ್ಪ ಮಾತ್ರವಲ್ಲ, ಲಕ್ಷ್ಮಣ ಸವದಿ ಹಾಗೂ ಶೆಟ್ಟರ್ ಜತೆಗೆ ನಡೆದುಕೊಂಡ ರೀತಿಯೂ ಸರಿಯಲ್ಲ. ಶೆಟ್ಟರ್ ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ಮಾತನಾಡಿಲ್ಲ. ಅವರು ಪಕ್ಷಕ್ಕೆ ಬರುತ್ತಾರೆ ಎಂದಾದರೆ ಸ್ವಾಗತಿಸುತ್ತೇವೆ. ಇನ್ನೂ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ ಎಂದು ಹೇಳಿದ್ದಾರೆ.
