ಬೆಂಗಳೂರು: ಬಿಜೆಪಿ ತನ್ನ ಹಿರಿಯ ನಾಯಕರನ್ನುಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಮೊದಲಾದ ಬಿಜೆಪಿ ಹಿರಿಯ ನಾಯಕರು ಕಾಂಗ್ರೆಸ್ ಸೇರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ತಮ್ಮ ಮಕ್ಕಳಿಗೆ ಭವಿಷ್ಯ ರೂಪಿಸಲು ಮಾತ್ರ ಈಶ್ವರಪ್ಪ, ಬಿಎಸ್ವೈ ಬಿಜೆಪಿಯಲ್ಲೇ ಉಳಿದಿದ್ದಾರೆ ಎಂದು ಹೇಳಿದೆ.
“ಈಶ್ವರಪ್ಪ, BSY ಬಿಜೆಪಿಯಲ್ಲೇ ಉಳಿದಿದ್ದೇಕೆ, ಒತ್ತಾಯದಿಂದ ಬಿಜೆಪಿ ತಾಳಕ್ಕೆ ಕುಣಿಯಲು ಪ್ರಯತ್ನಿಸುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಒಂದೇ.. ತಮ್ಮ ಮಕ್ಕಳಿಗೆ ಭವಿಷ್ಯ ರೂಪಿಸುವ ಪ್ರಯತ್ನಕ್ಕಾಗಿ ಮಾತ್ರ! ಆ ಅನಿವಾರ್ಯತೆ ಇಲ್ಲದೆ ಹೋಗಿದ್ದರೆ ಅವರೂ ಬಿಜೆಪಿ ತೊರೆದು ಬಂಡಾಯದ ಬಾವುಟ ಹಾರಿಸುತ್ತಿದ್ದರು.” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಅದಕ್ಕೂ ಮುನ್ನ, ಬಿಎಲ್ ಸಂತೋಷ್ ಹಾಗೂ ಪ್ರಹ್ಲಾದ್ ಜೋಷಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್, “ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಿಂದಲೇ ಮಾತಾಡಿಸುವುದು ಬಿಜೆಪಿಯ ಕುತಂತ್ರದ ಭಾಗ” ಎಂದು ಹೇಳಿದೆ.
“ಬಿಎಸ್ವೈಯನ್ನು ಮೊನ್ನೆ ಟಿಕೆಟ್ ಹಂಚಿಕೆಯ ಸಭೆಯಿಂದ ಹೊರಗಿಟ್ಟಿದ್ದ ಬಿಜೆಪಿ ಇಂದು ಏಕಾಏಕಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಮಾತನಾಡಿಸಲು ತಂದು ಕೂರಿಸಿದೆ. ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಿಂದಲೇ ಮಾತಾಡಿಸುವುದು ಬಿಜೆಪಿಯ ಕುತಂತ್ರದ ಭಾಗ” ಎಂದು ಹೇಳಿರುವ ಕಾಂಗ್ರೆಸ್, “ಶೆಟ್ಟರ್ ವಿರುದ್ಧ ಬಿಎಸ್ವೈ, ಬಿಎಸ್ವೈ ವಿರುದ್ಧ ಯತ್ನಾಳ್, ಸೋಮಣ್ಣ.ಜೋ-ಸಂ ಆಟ ಬಲು ಚೆನ್ನಾಗಿದೆ!” ಎಂದು ಟೀಕಿಸಿತ್ತು.
