ಮಂಡ್ಯ: ರಾಜ್ಯ ಅಸೆಂಬ್ಲಿ ಚುನಾವಣಾ ಕಣಕ್ಕೆ ರೋಚಕ ತಿರುವು ಪಡೆಯುವ ಸಾಧ್ಯತೆಗಳಿವೆ. ಕಳೆದ ಲೋಕಸಭಾ ಚುನಾವಣೆಯ ವೇಳೆಗೆ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯ ಈಗ ಮತ್ತೊಮ್ಮೆ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ.
ಮಂಡ್ಯ ಕ್ಷೇತ್ರದಲ್ಲಿ ಹೆಚ್ ಡಿ ಕುಮಾರಸ್ವಾಮಿಯವರು ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ಊಹಾಪೋಹಗಳ ನಡುವೆ, ಸಂಸದೆ ಸುಮಲತಾ ಅವರು ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿಯುವ ಬಗ್ಗೆಯೂ ಮಾತುಕತೆ ನಡೆದಿದೆ. ಒಂದು ವೇಳೆ, ಹೆಚ್ಡಿಕೆ ಮಂಡ್ಯದಿಂದ ಸ್ಪರ್ಧಿಸುವುದು ಪಕ್ಕಾ ಆದರೆ, ಸುಮಲತಾ ಮಂಡ್ಯದಿಂದ ಕಣಕ್ಕಿಳೀತಾರೆ ಎಂದು ಸುಮಲತಾ ಆಪ್ತ ಶಶಿಕುಮಾರ್ ಹನಕೆರೆ ಹೇಳಿದ್ದಾರೆ.
ಈಗಾಗಲೇ ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸಿರುವ ಕುಮಾರಸ್ವಾಮಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲ್ಲ ಎಂದು ಹೇಳಿದ್ದರಾದರೂ, ಮಂಡ್ಯ ಬ್ಯಾಂಕೊಂದರಲ್ಲಿ ತೆರೆದಿರುವ ಅಕೌಂಟ್ ವಿಚಾರ ಹೆಚ್ಡಿಕೆ ಸ್ಪರ್ಧೆ ಬಗ್ಗೆ ವದಂತಿಗೆ ಕಾರಣವಾಗಿದೆ. ನಾಮಪತ್ರ ಸಲ್ಲಿಕೆಯ ನಿಯಮಗಳ ಪ್ರಕಾರ, ಅಭರ್ಥಿಯು ಸ್ಥಳೀಯ ಬ್ಯಾಂಕೊಂದರಲ್ಲಿ ಖಾತೆಯನ್ನು ಹೊಂದಿರಬೇಕು. ಈ ಹಿನ್ನೆಲೆಯಲ್ಲಿ ಹೆಚ್ಡಿಕೆ ಬ್ಯಾಂಕ್ ಖಾತೆ ತೆರೆದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಅದೇ ವೇಳೆ, ಸಂಸದೆ ಸುಮಲತಾ ಅವರು ಬಿಜೆಪಿಯು ನಿರ್ಧರಿಸಿದರೆ, ನಾನು ಬಿಜೆಪಿ ಬೆಂಬಲದಿಂದ ಮಂಡ್ಯ ವಿಧಾನಸಭೆಗೆ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.
