ಲಕ್ನೋ: ಧಾರ್ಮಿಕ ಹಬ್ಬಗಳಾದ ಈದ್ ಮತ್ತು ಅಕ್ಷಯ ತೃತೀಯವನ್ನು ಇನ್ನೇನು ಕೆಲವೆ ದಿನಗಳಲ್ಲಿ ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆದೇಶವನ್ನು ನೀಡಿರುವ ಉತ್ತರ ಪ್ರದೇಶ ಸರಕಾರ “ರಸ್ತೆ ಮತ್ತು ಸಂಚಾರಕ್ಕೆ ಅಡ್ಡಿಪಡಿಸುವ ಮೂಲಕ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಾರದು” ಎಂದು ಸೂಚನೆ ನೀಡಿದೆ.
ಧಾರ್ಮಿಕ ಸ್ಥಳಗಳ ಭದ್ರತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಡಿಜಿಪಿ ವಿಶ್ವಕರ್ಮ ಹೇಳಿದ್ದಾರೆ.
ಪ್ರಕಟನೆಯ ಪ್ರಕಾರ ಯಾವುದೇ ಧಾರ್ಮಿಕ ಮೆರವಣಿಗೆ ಅಥವಾ ಯಾವುದೇ ಮೆರವಣಿಗೆಯನ್ನು ಸರಿಯಾದ ಅನುಮತಿ ಪಡೆಯದೆ ನಡೆಸುವ ಹಾಗಿಲ್ಲ. ಸಾಂಪ್ರದಾಯಿಕ ಧಾರ್ಮಿಕ ಮೆರವಣಿಗೆಗಳಿಗೆ ಮಾತ್ರ ಅನುಮತಿ ನೀಡಬೇಕು ಮತ್ತು ಹೊಸ ಕಾರ್ಯಕ್ರಮಗಳಿಗೆ ಅನಗತ್ಯ ಅನುಮತಿ ನೀಡಬಾರದು ಎಂದು ತಿಳಿಸಲಾಗಿದೆ.
