ಕಾರವಾರ: ಈ ಯುವ ಸಮಾವೇಶವನ್ನು ಹತ್ತು ವರ್ಷದ ಹಿಂದೆಯೇ ಮಾಡಬೇಕಿತ್ತು. ರಾಹುಲ್ ಗಾಂಧಿ ಈಗ ರಿಟೈರ್ ಮೆಂಟ್ ಮೋಡ್ನಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಭಟ್ಕಳದಲ್ಲಿ ಮಾತನಾಡಿದ ಅವರು ಪ್ರಣಾಳಿಕೆ ನಾವೂ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್ನವರೂ ಬಿಡುಗಡೆ ಮಾಡುತ್ತಾರೆ. ಕರಾವಳಿ ಪ್ರದೇಶಕ್ಕೆ ಕಾಂಗ್ರೆಸ್ ಪ್ರತ್ಯೇಕವಾದ ಒಂದು ಪ್ರಣಾಳಿಕೆ ಬಿಡುಗಡೆ ಮಾಡಿದರೂ ಸಹ ಇಲ್ಲಿ ಗೆಲ್ಲುವುದು ಸಾಧ್ಯವಿಲ್ಲ. ಕಳೆದ ಬಾರಿ ಕರಾವಳಿಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿತ್ತು. ಈ ಬಾರಿ ಅದೂ ಸಹ ಸೋತು ಕಾಂಗ್ರೆಸ್ ಮುಕ್ತ ಕರಾವಳಿ ಆಗಲಿದೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಕ್ಷೇತ್ರ ಪ್ರವಾಸ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದ ನಳಿನ್ ಕಟೀಲ್, ಅವರು ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ನಮ್ಮ ಸರ್ಕಾರ ಚುನಾವಣೆ ಘೋಷಣೆಯಾದ ಮೇಲೆ ಯೋಜನೆಗಳನ್ನು ಪ್ರಕಟಿಸಿಲ್ಲ. ನಾವು ನಮ್ಮ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಹಿಡಿದುಕೊಂಡು ಹೋಗುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.
ಉರಿಗೌಡ-ನಂಜೇಗೌಡ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಇತಿಹಾಸತಜ್ಞನಲ್ಲ. ಇತಿಹಾಸವನ್ನು ಹಲವೆಡೆ ತಿರುಚಲಾಗಿದೆ. ಈ ಬಗ್ಗೆ ಚರ್ಚೆಯಾಗಿ ಐತಿಹಾಸಿಕ ಸತ್ಯಗಳು ಹೊರಬರಲಿ ಎಂದರು.
