ವರುಣಾ ಕ್ಷೇತ್ರದ ಹೊಣೆಯನ್ನು ಬಿಜೆಪಿ ಹೈಕಮಾಂಡ್ ಸಚಿವ ಸೋಮಣ್ಣರ ತಲೆ ಮೇಲೆ ಹೊರಿಸಿದೆ. ಸದ್ಯ, ವರುಣಾದಲ್ಲಿ ತಮ್ಮ ಪರ ಪ್ರಚಾರಕ್ಕೆ ಸಿದ್ಧತೆ ನಡೆಸಿಕೊಳ್ಳುತ್ತಿರುವ ಸೋಮಣ್ಣ ಬಿಎಸ್ವೈ ಆಪ್ತರನ್ನು ಭೇಟಿಯಾಗಿ ಸಹಾಯಕ್ಕೆ ಮೊರೆ ಇಟ್ಟಿದಾರೆ.
ಬಿ.ಎಸ್.ಯಡಿಯೂರಪ್ಪ ಆಪ್ತ ಕಾ.ಪು. ಸಿದ್ದಲಿಂಗಸ್ವಾಮಿ ಅವರನ್ನು ಭೇಟಿಯಾದ ಸೋಮಣ್ಣ ನಿನ್ನನ್ನೇ ನಂಬಿದ್ದೇನೆ, ದಯವಿಟ್ಟು ಕೈಬಿಡಬೇಡ ಎಂದು ಕೇಳಿಕೊಂಡಿದ್ದಾರೆ.
ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ದಲಿಂಗಸ್ವಾಮಿ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಸೋಮಣ್ಣ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಚುನಾವಣೆಯಲ್ಲಿ ಬೆಂಬಲ ಕೊಡುವಂತೆ ಕೋರಿಕೊಂಡು, ಅಲ್ಲೇ ಉಪಹಾರ ಸೇವಿಸಿದ್ದಾರೆ.
‘ನಿನ್ನ ಬಗ್ಗೆ ನಾನು ಏನನ್ನೂ ಅಂದುಕೊಂಡಿಲ್ಲ. ನನ್ನನ್ನು ಬೆಂಬಲಿಸು. ನೀನೇ ನನ್ನ ಸೈನ್ಯದ ಕಮಾಂಡರ್ ಆಗಿ ಕೆಲಸ ಮಾಡು’ ಎಂದು ಸೋಮಣ್ಣ ಕೇಳಿದ್ದಾರೆ.
‘ಸಿದ್ದಲಿಂಗಸ್ವಾಮಿ ನನ್ನ ಸಹೋದರ ಇದ್ದಂತೆ. ಯಾವುದೋ ಜನ್ಮದಲ್ಲಿ ಅಣ್ಣನೋ, ತಮ್ಮನೋ ಆಗಿದ್ದ ಎನಿಸುವಂತಹ ಬಾಂಧವ್ಯವಿದೆ. ಅವರಿಗೆ ವರುಣ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಜವಾಬ್ದಾರಿಗಳನ್ನು ನೀಡಿದ್ದೇನೆ. ವರುಣದಲ್ಲಿ ಪ್ರಚಾರಕ್ಕೆ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೊದಲಾದವರು ಬರಲಿದ್ದಾರೆ ಎಂದು ಸೋಮಣ್ಣ ಹೇಳಿದ್ದಾರೆ.
