ಲಕ್ನೋ: ಪ್ರಯಾಗ್ ರಾಜ್ ನಲ್ಲಿ ಗ್ಯಾಂಗ್ ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಎಂಬವರನ್ನು ಗುಂಡಿಕ್ಕಿ ಕೊಂದ ಮೂವರು ಆರೋಪಿಗಳು, ಪ್ರಸಿದ್ಧಿ ಗಳಿಸುವುದಕ್ಕಾಗಿ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಅತೀಕ್ ಅಹ್ಮದ್ ಪುತ್ರ ಅಸದ್ ನನ್ನು ಕೊಲ್ಲಲಾಗಿತ್ತು.
ಶುಕ್ರವಾರ ರಾತ್ರಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದಾಗ ಅತೀಕ್ ಅಹ್ಮದ್ ಮತ್ತು ಸಹೋದರನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
“ಅತೀಕ್-ಅಶ್ರಫ್ ಗ್ಯಾಂಗನ್ನು ಸಂಪೂರ್ಣವಾಗಿ ನಾಶಮಾಡುವ ಮತ್ತು ಜನಪ್ರಿಯರಾಗುವ ಉದ್ದೇಶದಿಂದ ಅತೀಕ್ ಅಹ್ಮದ್ ಮತ್ತು ಅಶ್ರಫ್ ನನ್ನು ಹತ್ಯೆ ಮಾಡಿದ್ದೇವೆ” ಎಂದು ಬಂಧಿತ ದಾಳಿಕೋರರು ಪೊಲೀಸರಿಗೆ ತಿಳಿಸಿರುವುದಾಗಿ ಎಫ್ಐಆರ್ ಉಲ್ಲೇಖಿಸಿದೆ.
“ಅತೀಕ್ ಮತ್ತು ಅಶ್ರಫ್ ಅವರನ್ನು ಪೋಲೀಸ್ ಕಸ್ಟಡಿಗೆ ತೆಗೆದುಕೊಂಡಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದ ಕ್ಷಣ, ನಾವು ಪತ್ರಕರ್ತರಂತೆ ನಟಿಸಿದೆವು. ಪತ್ರಕರ್ತರ ಗುಂಪಿನೊಂದಿಗೆ ಬೆರೆತು ಈ ಹತ್ಯೆಗೆ ಪ್ಲ್ಯಾನ್ ಮಾಡಿದ್ದೆವು” ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.
