ಎಡಗೈ-ಬಲಗೈ ಸಮುದಾಯದ ಕಿತ್ತಾಟದಲ್ಲಿ ಗೊಂದಲದ ಗೂಡಾಗಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಕೊನೆಗೂ ಭರ್ತಿಯಾಗಿದೆ. ಬಳ್ಳಾರಿ ಮೇಯರ್ ಆಗಿ ಆಯ್ಕೆಗೊಂಡ ತ್ರಿವೇಣಿಗೆ ಕೇವಲ 21 ವರ್ಷ ಪ್ರಾಯವಾಗಿದ್ದು, ದೇಶದಲ್ಲೇ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಕಾಂಗ್ರೆಸ್ ಪಕ್ಷದ 4 ನೇ ವಾರ್ಡಿನ ಡಿ.ತ್ರಿವೇಣಿ ಮೇಯರ್ ಆಗಿ ಆಯ್ಕೆಗೊಂಡರೆ, ಉಪ ಮೇಯರ್ ಆಗಿ 33 ನೇ ವಾರ್ಡಿನ ಬಿ.ಜಾನಕಿ ಆಯ್ಕೆಯಾಗಿದ್ದಾರೆ. ಚುನಾವಣೆಗೆ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಉಪಮೇಯರ್ ಸ್ಥಾನಕ್ಕೆ ಜಾನಕಿ ಒಬ್ಬರೇ ನಾಮಪತ್ರ ನೀಡಿದ್ದರಿಂದ ಅವರ ಅಯ್ಕೆ ಅವಿರೋಧವಾಗಿ ನಡೆಯಿತು. ಮೇಯರ್ ಸ್ಥಾನಕ್ಕೆ ಡಿ.ತ್ರಿವೇಣಿ ಮತ್ತು ನಾಗರತ್ನ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ನಿರೀಕ್ಷೆಯಂತೆ ತ್ರಿವೇಣಿಗೆ 28 ಮತ್ತು ನಾಗರತ್ನಗೆ 16 ಮತಗಳು ಬಂದವು.
39 ಪಾಲಿಕೆ ಸದಸ್ಯರು ಮತ್ತು ಸಂಸದರು, ಶಾಸಕರು ಸೇರಿ ಒಟ್ಟು 44 ಮತಗಳಲ್ಲಿ ಬಿಜೆಪಿ 16 ಮತಗಳನ್ನು, ಕಾಂಗ್ರೆಸ್ 28 ಮತಗಳನ್ನು ಹೊಂದಿತ್ತು. ಮೇಯರ್ ಸ್ಥಾನ ಎಸ್ಸಿ ಸಾಮಾನ್ಯ ಮತ್ತು ಉಪ ಮೇಯರ್ ಎಸ್ಟಿ ಮಹಿಳೆಗೆ ಮೀಸಲಿಡಲಾಗಿತ್ತು.
ಚುನಾವಣೆ ಪ್ರಕ್ರಿಯೆಯಲ್ಲಿ ಮತದಾನ ಮಾಡಲು ಕಾಂಗ್ರೆಸ್ ನ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತು ಬಿಜೆಪಿಯ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಸಂಸದ ವೈ.ದೇವೇಂದ್ರಪ್ಪ ಪಾಲ್ಗೊಂಡಿದ್ದರು.
