ಬೆಂಗಳೂರು : ಸಿದ್ದರಾಮಯ್ಯ ಮುಸ್ಲಿಮರ ನಾಯಕರಾಗಿದ್ದರೆ ,ಡಿ.ಕೆ.ಶಿವಕುಮಾರ್ ಕ್ರಿಮಿನಲ್ಗಳ ನಾಯಕರಾಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ರೋಹಿ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಟೀಕಿಸಿದ್ದಾರೆ.
ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಾದಾಗಲೂ ಇವರು ಪಿಎಫ್ಐ ಸಂಘಟನೆಯನ್ನು ನಿಷೇಧಿಸಲು ನಿರಾಕರಿಸಿದರು. ಮುಸ್ಲಿಮರಿಗೇ ಬೇಕಿಲ್ಲದ ಟಿಪ್ಪೂ ಜಯಂತಿಯನ್ನು ಮಾಡುವ ಮೂಲಕ ಕೊಡಗಿನಲ್ಲಿ ಕೋಮು ದ್ವೇಷದ ಬೆಂಕಿ ಹಚ್ಚಿದರು. ಇಂದಗೂ ಈ ಪ್ರಕರಣದ ಸಲುವಾಗಿ ನೂರಾರು ಮಂದಿ ಕೋರ್ಟಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಕೈಗೆ ರಕ್ತ ಅಂಟಿಕೊಂಡಿದೆ. ಇದು ನಮ್ಮ ಮತದ ಪ್ರಶ್ನೆಯಲ್ಲ ನಮ್ಮ ಅಸ್ತಿತ್ವದ ಪ್ರಶ್ನೆ ಎಂದಿದ್ದಾರೆ.
ಡ್ರಗ್ ಸಪ್ಲೈ, ಜಮೀನು ಒತ್ತುವರಿ, ಭೂಕಬಳಿಕೆ, ದರೋಡೆ, ಹಲ್ಲೆ ಕೇಸುಗಳಲ್ಲಿ ಭಾಗಿಯಾಗಿರುವ ಆತಿಕ್ ಅಹ್ಮದ್ , ಆಶ್ರಫ್ ಅಹ್ಮದ್ ರನ್ನು ಇಮ್ರಾನ್ ಪ್ರತಾಪ್ಗಡಿ ತಮ್ಮ ಮನೆಗೆ ಕರೆದು ಸನ್ಮಾನಿಸುತ್ತಾರೆ. ಬಹಿರಂಗ ವೇದಿಕೆಯಲ್ಲಿ ಮುಸ್ಲಿಮರಿಗೆ ತಲೆ ತಗ್ಗಿಸಲು ಗೊತ್ತಿಲ್ಲ. ತಲೆ ಕಡಿಯಲು ಗೊತ್ತು ಎಂದು ಹೇಳಿಕೆ ನೀಡುತ್ತಾರೆ. ಅಂಥವರೊಡನೆ ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಾರೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ನಮ್ಮ ಕೃತ್ಯ ಎಂದು ಐಸಿಸ್ ಹೇಳುವ ಮೊದಲೇ , ಅವರು ನಮ್ಮ ಸೋದರರಿದ್ದಂತೆ ಎಂದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳಿದ್ದರು ಎಂದು ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
