Tuesday, August 4, 2026
Homeಜಿಲ್ಲಾ ಸುದ್ದಿಗಳುಐಐಟಿ ಪ್ರವೇಶದಲ್ಲಿ ಸಾಧನೆ: ಕೊರಮ ಸಮಾಜದಿಂದ ಕುಮಾರ್ ವಿಷ್ಣುಗೆ ಅದ್ದೂರಿ ಸನ್ಮಾನ

ಐಐಟಿ ಪ್ರವೇಶದಲ್ಲಿ ಸಾಧನೆ: ಕೊರಮ ಸಮಾಜದಿಂದ ಕುಮಾರ್ ವಿಷ್ಣುಗೆ ಅದ್ದೂರಿ ಸನ್ಮಾನ

ಶಹಪುರ: ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗಿರುವ ಕುಮಾರ್ ವಿಷ್ಣು ಅವರಿಗೆ ಶಹಪುರ ತಾಲೂಕಿನ ಕೊರಮ ಸಮಾಜದ ವತಿಯಿಂದ ಆತ್ಮೀಯ ಸನ್ಮಾನ ಸಮಾರಂಭ ಆಯೋಜಿಸಲಾಯಿತು.

ಶಹಪುರ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಜೇಂದ್ರ ಅವರ ಪುತ್ರ ಕುಮಾರ್ ವಿಷ್ಣು ಅವರು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಮೂಲಕ ಕೊರಮ ಸಮಾಜಕ್ಕೆ ಹೆಮ್ಮೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಯಾದಗಿರಿ ಜಿಲ್ಲಾ ಕೊರಮ ಸಮಾಜದ ಅಧ್ಯಕ್ಷ ಯಲ್ಲಪ್ಪ ಭಜಂತ್ರಿ (ವನದುರ್ಗ) ಅವರು, “ಮುಂದೆ ಗುರಿ, ಹಿಂದೆ ಗುರು ಹಾಗೂ ಓದುವ ಛಲ ಈ ಮೂರು ಇದ್ದರೆ ಜೀವನದಲ್ಲಿ ಯಾವುದೇ ಸಾಧನೆ ಅಸಾಧ್ಯವಲ್ಲ. ಈ ಮೂರು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕುಮಾರ್ ವಿಷ್ಣು ಸಾಧನೆ ಮಾಡಿದ್ದಾರೆ. ಅವರ ಯಶಸ್ಸು ಸಮಾಜದ ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ” ಎಂದು ಹೇಳಿದರು.

ಅಲ್ಲದೆ, ತಂದೆ ಗಜೇಂದ್ರ ಅವರ ಪರಿಶ್ರಮ ಮತ್ತು ಕುಟುಂಬದ ಬೆಂಬಲದಿಂದ ಕುಮಾರ್ ವಿಷ್ಣು ಈ ಸಾಧನೆ ಮಾಡಲು ಸಾಧ್ಯವಾಗಿದೆ. ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪರಿಶ್ರಮದಿಂದ ಓದಿದ ಫಲವಾಗಿ ಅವರು ಇದೀಗ ಮುಂಬೈನ ಪ್ರತಿಷ್ಠಿತ ಕಾಲೇಜಿನಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುತ್ತಿದ್ದಾರೆ. ಮುಂದಿನ ವಿದ್ಯಾಭ್ಯಾಸದಲ್ಲಿಯೂ ಇನ್ನಷ್ಟು ಸಾಧನೆ ಮಾಡಿ ಸಮಾಜ ಹಾಗೂ ರಾಜ್ಯಕ್ಕೆ ಕೀರ್ತಿ ತರಲೆಂದು ಶುಭ ಹಾರೈಸಿದರು.

ಬಳಿಕ ಶಹಪುರ ತಾಲೂಕಿನ ಕೊರಮ ಸಮಾಜದ ವತಿಯಿಂದ ಕುಮಾರ್ ವಿಷ್ಣು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಭಜಂತ್ರಿ (ವನದುರ್ಗ), ಸಮಾಜದ ಮುಖಂಡರಾದ ಶರಣಪ್ಪ ಭಜಂತ್ರಿ, ಸಾಗರ ಭೀಮರಾಯ ಭಜಂತ್ರಿ, ಬಾಗೇಶ್ ಭಜಂತ್ರಿ, ಹಣಮಂತ ಸಾಗರ, ಶರಣು ಮಲ್ಲಿಕಾರ್ಜುನ, ಸುರಪುರ ತಾಲೂಕು ಅಧ್ಯಕ್ಷ ತಿಪ್ಪಣ್ಣ ಭಜಂತ್ರಿ, ಬಸವರಾಜ್ ಸೇರಿದಂತೆ ಸಮಾಜದ ಅನೇಕ ಮುಖಂಡರು, ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.

ವರದಿ : ವಿಜಯಕುಮಾರ್ ದರ್ಶನಾಪುರ

ಹೆಚ್ಚಿನ ಸುದ್ದಿ