ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ಸ್ ಕಾವೇರಿ ನೀರು ಹರಿಸಲು CWMA ಆದೇಶ: ಕರ್ನಾಟಕಕ್ಕೆ ಮತ್ತೆ ಆಘಾತ!
ನವದೆಹಲಿ :: ತಮಿಳುನಾಡಿಗೆ (Tamilnadu) ಕಾವೇರಿ ನೀರು (Cauvery) ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ನಿರ್ಣಾಯಕ ಸಭೆ ಮುಕ್ತಾಯಗೊಂಡಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶವನ್ನೇ ಎತ್ತಿಹಿಡಿಯುವ ಮೂಲಕ ಕರ್ನಾಟಕಕ್ಕೆ (Karnataka) ಮತ್ತೆ ಬಿಗ್ ಶಾಕ್ ನೀಡಿದೆ.
ಮೇಲ್ಮನವಿ ವಜಾ ಮಾಡಿ CWRC ಆದೇಶ
ದಿನಕ್ಕೆ 3,500 ಕ್ಯೂಸೆಕ್ ನೀರು ಹರಿಸುವಂತೆ CWRC ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಪ್ರಾಧಿಕಾರದ ಮಹತ್ವದ ಸಭೆ ಜರುಗಿದ್ದು, ಸಭೆಯಲ್ಲಿ ರಾಜ್ಯದ ವಾದವನ್ನು ತಳ್ಳಿಹಾಕಿ CWRC ಆದೇಶವನ್ನೇ ಎತ್ತಿಹಿಡಿಯಲಾಗಿದೆ.
ಅಂಕಿ-ಅಂಶಗಳ ಸಮೇತ ಗೌರವ್ ಗುಪ್ತಾ ಪ್ರಬಲ ವಾದ
ಸಭೆಯಲ್ಲಿ ಕರ್ನಾಟಕದ ಪರವಾಗಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ರಾಜ್ಯದ ಭೀಕರ ಬರ ಪರಿಸ್ಥಿತಿಯನ್ನು ಅಂಕಿ-ಅಂಶಗಳ ಸಮೇತ ಬಿಚ್ಚಿಟ್ಟರು. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಪ್ರಸ್ತುತ ಕೇವಲ 36.69 ಟಿಎಂಸಿ ನೀರು ಸಂಗ್ರಹವಿದ್ದು, ಕಳೆದ ವರ್ಷ ಇದೇ ವೇಳೆಗೆ 99 ಟಿಎಂಸಿ ನೀರಿತ್ತು ಎಂದು ವಿವರಿಸಿದರು. ಸಾಮಾನ್ಯ ವರ್ಷಗಳಲ್ಲಿ ಈ ಸಮಯಕ್ಕೆ 40 ಟಿಎಂಸಿ ನೀರು ಹರಿಯುತ್ತಿತ್ತು, ಆದರೆ ಈ ಬಾರಿ ತೀವ್ರ ಮಳೆ ಅಭಾವದಿಂದ ಜೂನ್ ಮತ್ತು ಜುಲೈನಲ್ಲಿ ಬಿಳಿಗುಂಡ್ಲು ಮೂಲಕ ಹರಿದಿರುವುದು ಕೇವಲ 3.55 ಟಿಎಂಸಿ ನೀರು ಮಾತ್ರವಾಗಿದೆ. ಅಲ್ಲದೆ, ಬಿಳಿಗುಂಡ್ಲುವಿನಲ್ಲಿ ದಿನಕ್ಕೆ 3,500 ಕ್ಯೂಸೆಕ್ಸ್ ಹರಿವು ದಾಖಲಾಗಬೇಕಾದರೆ ನಮ್ಮ ಜಲಾಶಯಗಳಿಂದ ಅದರ ದುಪ್ಪಟ್ಟು ನೀರನ್ನು ಕೆಳಕ್ಕೆ ಹರಿಸಬೇಕಾಗುತ್ತದೆ, ಆದ್ದರಿಂದ ಈ ಆದೇಶ ಪಾಲನೆ ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಮತ್ತೆ ಕಾವೇರಿ ಪ್ರತಿಭಟನೆ ಬಿಸಿ
ಕರ್ನಾಟಕದ ಅಧಿಕಾರಿಗಳು ನೀರಿಲ್ಲದ ವಾಸ್ತವ ಸ್ಥಿತಿಯನ್ನು ಪ್ರಾಧಿಕಾರದ ಮುಂದಿಟ್ಟರೂ, ತಮಿಳುನಾಡಿನ ವಾದಕ್ಕೆ ಮಣೆ ಹಾಕಿರುವ CWMA ದಿನಕ್ಕೆ 3,500 ಕ್ಯೂಸೆಕ್ಸ್ನಂತೆ 15 ದಿನ ನೀರು ಬಿಡಲೇಬೇಕೆಂದು ಸೂಚಿಸಿದೆ. ಪ್ರಾಧಿಕಾರದ ಈ ನಿಲುವಿನಿಂದಾಗಿ ಕಾವೇರಿ ಕೊಳ್ಳದ ರೈತರಲ್ಲಿ ಆಕ್ರೋಶ ಮತ್ತಷ್ಟು ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಮುಂದಿನ ಕಾನೂನಾತ್ಮಕ ಹೆಜ್ಜೆಯತ್ತ ಮುಖ ಮಾಡಿದೆ.
