Monday, August 10, 2026
Homeಜಿಲ್ಲಾ ಸುದ್ದಿಗಳುಶಾಖಾಪುರ ದಲಿತರ ಮೇಲಿನ ಹಲ್ಲೆ ಪ್ರಕರಣ: ಸೈನಿಕನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಭಾರತೀಯ ಸೇನೆಯಿಂದ ಉನ್ನತ...

ಶಾಖಾಪುರ ದಲಿತರ ಮೇಲಿನ ಹಲ್ಲೆ ಪ್ರಕರಣ: ಸೈನಿಕನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಭಾರತೀಯ ಸೇನೆಯಿಂದ ಉನ್ನತ ಮಟ್ಟದ ಪತ್ರ **

** ಶಾಖಾಪುರ ದಲಿತರ ಮೇಲಿನ ಹಲ್ಲೆ ಪ್ರಕರಣ: ಸೈನಿಕನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಭಾರತೀಯ ಸೇನೆಯಿಂದ ಉನ್ನತ ಮಟ್ಟದ ಪತ್ರ **

ಯಾದಗಿರಿ: ಸುರಪುರ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣವು ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ದೇಶ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ತಳವಾರ ಅವರ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವಂತೆ ಕೋರಿ ಭಾರತೀಯ ಸೇನೆಯಿಂದ ಮುಖ್ಯಮಂತ್ರಿ, ಗೃಹ ಸಚಿವರು, ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಅಧಿಕೃತ ಪತ್ರ ಬರೆಯಲಾಗಿದೆ.

ಘಟನೆಯ ಹಿನ್ನೆಲೆ ಏನು?

ಆಗಸ್ಟ್ 1ರಂದು ಶಾಖಾಪುರ ಗ್ರಾಮದಲ್ಲಿ ಸತ್ತವರಿಗಾಗಿ ಗುಂಡಿ (ಕುಣಿ) ಅಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ, ಶಿವಕುಮಾರ್ ತಳವಾರ ಅವರ ತಾಯಿ ಮತ್ತು ಮಾವ ಸೇರಿದಂತೆ ದಲಿತ ಸಮುದಾಯದ ಕೆಲವರ ಮೇಲೆ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಸೈನಿಕ ಶಿವಕುಮಾರ್ ಅವರು, ಘಟನೆಯನ್ನು ತೀವ್ರವಾಗಿ ಖಂಡಿಸಿ ಸೆಲ್ಫಿ ವಿಡಿಯೋ ಮಾಡುವ ಮೂಲಕ ತಮ್ಮ ಕುಟುಂಬಕ್ಕೆ ಜೀವ ಭಯವಿದ್ದು, ಕೂಡಲೇ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.

<“ದಲಿತ ಮುಖಂಡರ ಆಕ್ರೋಶ:
“ಇಷ್ಟೆಲ್ಲಾ ಪ್ರತಿಭಟನೆಗಳು ಹಾಗೂ ಹೋರಾಟಗಳನ್ನು ನಡೆಸಿದರೂ ಇದುವರೆಗೆ ಆರೋಪಿಗಳನ್ನು ಬಂಧಿಸದಿರುವುದು ನೋವಿನ ಸಂಗತಿ. ಇದರಿಂದ ಕಾನೂನು ಮತ್ತು ವ್ಯವಸ್ಥೆಯ ಮೇಲಿರುವ ನಮ್ಮ ಭರವಸೆ ಸಡಿಲಗೊಳ್ಳುತ್ತಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.”

  • ಮಲ್ಲಿಕಾರ್ಜುನ ಕ್ರಾಂತಿ, ದಲಿತ ಮುಖಂಡ

17 ಜನರ ವಿರುದ್ಧ ಎಫ್‌ಐಆರ್ ದಾಖಲು:
ಈ ಘಟನೆಗೆ ಸಂಬಂಧಿಸಿದಂತೆ ಸುರಪುರ ಪೊಲೀಸ್ ಠಾಣೆಯಲ್ಲಿ ಒಟ್ಟು 17 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ, ಪ್ರಕರಣ ದಾಖಲಾಗಿ ಹಲವು ದಿನಗಳು ಕಳೆದರೂ ಇದುವರೆಗೆ ಯಾವುದೇ ಆರೋಪಿಗಳನ್ನು ಬಂಧಿಸದಿರುವುದು ಪೊಲೀಸರ ಕಾರ್ಯವೈಖರಿಯ ಬಗ್ಗೆ ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸೇನೆಯಿಂದ ಗಂಭೀರ ಪರಿಗಣನೆ ಮತ್ತು ರಕ್ಷಣೆಗಾಗಿ ಆಗ್ರಹ:

ಸೈನಿಕ ಶಿವಕುಮಾರ್ ಅವರ ಕುಟುಂಬದ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಭಾರತೀಯ ಸೇನೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕುಟುಂಬಕ್ಕೆ ತಕ್ಷಣವೇ ಬಿಗಿ ಪೊಲೀಸ್ ರಕ್ಷಣೆ ಕಲ್ಪಿಸಿ, ಯಾವುದೇ ಭಯವಿಲ್ಲದೆ ಗ್ರಾಮದಲ್ಲಿ ನೆಮ್ಮದಿಯಿಂದ ವಾಸಿಸಲು ಸುರಕ್ಷಿತ ವಾತಾವರಣವನ್ನು ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಪೊಲೀಸ್ ಇಲಾಖೆಯ ಸ್ಪಷ್ಟನೆ:

“ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಸಮಗ್ರ ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲೇ ಇಲ್ಲದವರ ಹೆಸರುಗಳೂ ಕೂಡ ದೂರಿನಲ್ಲಿ ಸೇರಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಇದೆ. ಈ ಎಲ್ಲ ಆಯಾಮಗಳನ್ನೂ ಪರಿಶೀಲಿಸಿ, ತನಿಖೆಯ ನೈಜ ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.”

— ಪೃಥ್ವಿಕ್ ಶಂಕರ್, ಯಾದಗಿರಿ ಎಸ್ಪಿ

ಹೆಚ್ಚಿನ ಸುದ್ದಿ