Sunday, May 31, 2026
Homeಬೆಂಗಳೂರುಅಚ್ಚಳಿಯದ ‘ಜಗದೀಶಣ್ಣ’: ಅಧಿಕಾರ ಮೀರಿದ ಅಜಾತಶತ್ರು ಕಾರ್ಯಕರ್ತ!ಬರಹ : ಬಸವರಾಜ ಹೂಗಾರ

ಅಚ್ಚಳಿಯದ ‘ಜಗದೀಶಣ್ಣ’: ಅಧಿಕಾರ ಮೀರಿದ ಅಜಾತಶತ್ರು ಕಾರ್ಯಕರ್ತ!ಬರಹ : ಬಸವರಾಜ ಹೂಗಾರ

ಬೆಂಗಳೂರು :: ಕರ್ನಾಟಕ ರಾಜಕಾರಣದಲ್ಲಿ ಮತ್ತು ಸಂಘಟನಾ ವಲಯದಲ್ಲಿ ತತ್ವ-ಸಿದ್ಧಾಂತಗಳಿಗಾಗಿ ಬದುಕನ್ನು ಸವೆಸುವ ಅದೆಷ್ಟೋ ಮುಖಗಳು ಬಂದು ಹೋಗುತ್ತವೆ. ಆದರೆ, ಕೆಲವರು ಮಾತ್ರ ತಾವು ಬದುಕಿದ್ದಾಗಲೂ, ಇಲ್ಲದಿದ್ದಾಗಲೂ ಜನರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ಕುಳಿತುಬಿಡುತ್ತಾರೆ. ಅಂತಹ ಅಪರೂಪದ, ನಿಷ್ಕಲ್ಮಶ ವ್ಯಕ್ತಿತ್ವದ ಜೀವಂತ ಉದಾಹರಣೆ ನಮ್ಮನ್ನಗಲಿದ ದಿವಂಗತ ಜಗದೀಶ್ ಹಿರೇಮಣಿ. ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ನಡೆದ ಅವರ ‘ನುಡಿ ನಮನ’ ಕಾರ್ಯಕ್ರಮ ಕೇವಲ ಒಂದು ಔಪಚಾರಿಕ ಸ್ಮರಣಾ ಸಭೆಯಾಗಿರಲಿಲ್ಲ; ಅದು ಸಹಸ್ರಾರು ಕಾರ್ಯಕರ್ತರ ಕಣ್ಣೀರ ಮಹಾಸಾಗರವಾಗಿತ್ತು.


ರಾಜಕೀಯ ಪಕ್ಷಗಳ ಕಚೇರಿಗಳು ಸಾಮಾನ್ಯವಾಗಿ ಸದಾ ಜನಜಂಗುಳಿ, ಘೋಷಣೆಗಳು, ರಾಜಕೀಯ ಚರ್ಚೆಗಳಿಂದ ಗಿಜಿಗುಡುತ್ತಿರುತ್ತವೆ. ಆದರೆ ಅಂದು ಜಗನ್ನಾಥ ಭವನದ ಆವರಣಕ್ಕೆ ಕಾಲಿಡುತ್ತಿದ್ದಂತೆಯೇ ಒಂದು ವಿಚಿತ್ರ, ಭಾರವಾದ ಮೌನ ಆವರಿಸಿತ್ತು. ಸಭಾಂಗಣದ ಗೋಡೆಗಳೂ ಕೂಡ ಇಂದು ದುಃಖದ ಭಾರವನ್ನು ಹೊತ್ತ ನಿಂತಂತೆ ಭಾಸವಾಗುತ್ತಿತ್ತು. ವೇದಿಕೆಯ ಮೇಲಿದ್ದ ಜಗದೀಶಣ್ಣನ ಭಾವಚಿತ್ರವನ್ನು ನೋಡಿದ ಪ್ರತಿಯೊಬ್ಬರ ಮನಸ್ಸಿನಲ್ಲೂ ಸಹಸ್ರ ನೆನಪುಗಳು ಒಮ್ಮೆಲೇ ಉಕ್ಕಿ ಬರುತ್ತಿದ್ದವು. “ಇವತ್ತು ಕೂಡ ಅವರು ಎಂದಿನಂತೆ ಆ ಬಾಗಿಲಿಂದ ನಗುತ್ತಾ ಒಳಬಂದು, ಹೆಗಲ ಮೇಲೆ ಕೈಹಾಕಿ ಮಾತನಾಡಿಸುತ್ತಾರೇನೋ…” ಎಂಬ ಭ್ರಮೆ ಕ್ಷಣಕಾಲ ಮೂಡುತ್ತಿತ್ತು. ಆದರೆ, ವಿಧಿಯ ಕಠೋರ ಸತ್ಯ ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುತ್ತಿತ್ತು.

ಹುದ್ದೆಗಳನ್ನಲ್ಲ, ಹೃದಯಗಳನ್ನು ಗೆದ್ದ ನಾಯಕ
ಕಾರ್ಯಕ್ರಮ ಆರಂಭವಾಗುವ ಮುನ್ನವೇ ಜಗನ್ನಾಥ ಭವನ ಜನಸಾಗರದಿಂದ ತುಂಬಿ ತುಳುಕುತ್ತಿತ್ತು. ಸಭಾಂಗಣದಲ್ಲಿ ಕುಳಿತುಕೊಳ್ಳಲು ಜಾಗ ಸಾಲದೆ ನೂರಾರು ಕಾರ್ಯಕರ್ತರು, ಹಿತೈಷಿಗಳು ಹೊರಗೆ ನಿಂತೇ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಈ ಜನರ ಸಂಖ್ಯೆಯೇ ಜಗದೀಶಣ್ಣ ಗಳಿಸಿದ ಬದುಕಿನ ನಿಜವಾದ ಸಂಪತ್ತು. ಅವರು ರಾಜಕೀಯದಲ್ಲಿ ದೊಡ್ಡ ದೊಡ್ಡ ಹುದ್ದೆಗಳ ಬೆನ್ನತ್ತಿ ಹೋದವರಲ್ಲ, ಬದಲಿಗೆ ಜನರ ಹೃದಯಗಳನ್ನು ಗೆದ್ದವರು. ಅವರು ಮಾಡಿದ್ದು ಅಧಿಕಾರದ ರಾಜಕೀಯವಲ್ಲ, ಬದಲಿಗೆ ಪ್ರೀತಿ-ವಿಶ್ವಾಸದ ಸಂಬಂಧಗಳ ಹೆಣಿಗೆ. ರಾಷ್ಟ್ರೀಯ ವಿಚಾರಧಾರೆಯನ್ನು ಉಸಿರಾಗಿಸಿಕೊಂಡು ಬದುಕಿದ ಆ ಅಪರೂಪದ ದೇಶಭಕ್ತನ ನೆನಪಿಗಾಗಿ ಪಕ್ಷದ ಸಣ್ಣ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ಮಟ್ಟದ ನಾಯಕರವರೆಗೆ ಎಲ್ಲರೂ ಒಂದಾಗಿ ನಿಂತಿದ್ದರು.


ಅಂದು ವೇದಿಕೆಯ ಮೇಲಿದ್ದ ದೃಶ್ಯಗಳು ಎಂಥವರ ಕಲ್ಲೆದೆಯನ್ನೂ ಕರಗಿಸುವಂತಿದ್ದವು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಜಿ ಅವರು ಜಗದೀಶಣ್ಣನ ಕುರಿತು ಆಡಿದ ಪ್ರತಿಯೊಂದು ಮಾತೂ ಅಲ್ಲಿದ್ದವರ ಅಂತರಾಳವನ್ನು ಮುಟ್ಟಿತು. ಇನ್ನು ಪರಿವಾರದ ಹಿರಿಯರಾದ ಮಂಗೇಶ್ ಬೆಂದೆ ಜಿ ಅವರು ಮಾತನಾಡಲು ನಿಂತಾಗ ಸಭಾಂಗಣದಲ್ಲಿ ಅಕ್ಷರಶಃ ನಿಶಬ್ದ ಆವರಿಸಿತು. ಜಗದೀಶಣ್ಣನೊಂದಿಗಿನ ಸಂಘಟನಾ ಬದುಕಿನ ದಿನಗಳನ್ನು ನೆನಪಿಸಿಕೊಳ್ಳುವಾಗ ಅವರ ಧ್ವನಿ ಗದ್ಗದಿತವಾಗಿತ್ತು. ಕಣ್ಣೀರನ್ನು ತಡೆದುಕೊಳ್ಳಲು ಅವರು ಪ್ರಯತ್ನಿಸಿದರೂ, ಕಣ್ಣಂಚಿನಿಂದ ನೀರು ನಿರಂತರವಾಗಿ ಸುರಿಯುತ್ತಿತ್ತು. “ಇಂತಹ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ” ಎಂದು ಮಂಗೇಶ್ ಜಿ ಭಾವುಕರಾದಾಗ, ಇಡೀ ಸಭಾಂಗಣವೇ ಕಣ್ಣೀರಲ್ಲಿ ಮುಳುಗಿತು.


ರಾಜಕೀಯ ಮರೆತ ಭಾವನಾತ್ಮಕ ಕ್ಷಣ
ಪಕ್ಷದ ರಾಜ್ಯ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಮಾತನಾಡುವಾಗಲೂ ಅವರ ಧ್ವನಿಯಲ್ಲಿನ ದುಃಖ ಎದ್ದು ಕಾಣುತ್ತಿತ್ತು. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಾರ್ವಜನಿಕ ಜೀವನ ಆರಂಭಿಸಿ, ಇಂದು ಸಾವಿರಾರು ಜನರ ಮನಸ್ಸಿನಲ್ಲಿ ನೆಲೆಸಿರುವ ಜಗದೀಶಣ್ಣನ ಸಂಘಟನಾ ಚಾತುರ್ಯವನ್ನು ಅವರು ಸ್ಮರಿಸಿದರು. ಕೃಷ್ಣಾಜಿ, ವಿಶ್ವನಾಥ್ ಜಿ ಸೇರಿದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ABVP) ಹಿರಿಯರು ಜಗದೀಶಣ್ಣನ ಹೋರಾಟದ ದಿನಗಳನ್ನು ನೆನಪಿಸಿಕೊಂಡರು.


ಈ ಇಡೀ ಕಾರ್ಯಕ್ರಮವನ್ನು ಅತ್ಯಂತ ಭಾವುಕರಾಗಿ ನಿರೂಪಿಸಿದ ವಿಧಾನಪರಿಷತ್ ಸದಸ್ಯ ಕೇಶವ ಪ್ರಸಾದ್ ಜಿ ಅವರ ಧ್ವನಿಯಲ್ಲೂ ಅಪಾರ ವ್ಯಥೆ ಕಾಣಿಸುತ್ತಿತ್ತು. ಕಾರ್ಯಕ್ರಮವನ್ನು ಅವರು ಮುನ್ನಡೆಸುತ್ತಿದ್ದರೂ, ಒಡನಾಡಿಯೊಬ್ಬನನ್ನು ಕಳೆದುಕೊಂಡ ಸ್ನೇಹಿತನ ಹೃದಯ ಒಳಗೊಳಗೇ ಮೌನವಾಗಿ ರೋದಿಸುತ್ತಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಶಾಂತಿ ಮಂತ್ರ ಹೇಳಿದ ಜಗದೀಶಣ್ಣನ ಹಿರಿಯಕ್ಕನಂತಿದ್ದ ಮಧುಶ್ರೀ ಎಂ. ಸ್ವಾಮಿ ಅವರ ನಡುಗುವ ಧ್ವನಿ ಮತ್ತು ಕಣ್ಣೀರು ಅಲ್ಲಿದ್ದವರ ಶೋಕವನ್ನು ಇಮ್ಮಡಿಗೊಳಿಸಿತು. ಮಾಜಿ ಸಚಿವರು, ಸಂಸದರು, ಶಾಸಕರು, ಸಾಮಾನ್ಯ ಕಾರ್ಯಕರ್ತರು ಎನ್ನುವ ಯಾವುದೇ ತಾರತಮ್ಯ ಅಂದು ಅಲ್ಲಿರಲಿಲ್ಲ. ಹುದ್ದೆಗಳ ಅಂತರ ಮರೆತು, ರಾಜಕೀಯದ ಗಡಿ ಮೀರಿ ಎಲ್ಲರೂ ಒಬ್ಬ ನಿಷ್ಠಾವಂತ ಒಡನಾಡಿಯ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದರು.


ನಿರಂತರ ದಾರಿದೀಪ ಈ ವ್ಯಕ್ತಿತ್ವ
ಜಗದೀಶ್ ಹಿರೇಮಣಿ ಅವರ ಕುಟುಂಬಸ್ಥರನ್ನು ನೋಡಿದಾಗ ಅಲ್ಲಿದ್ದ ಯಾರಿಗೂ ದುಃಖ ತಡೆಯಲಾಗಲಿಲ್ಲ. ಪಕ್ಷ ಮತ್ತು ಸಮಾಜಕ್ಕಾಗಿ ತನ್ನ ಬದುಕನ್ನೇ ಸಮರ್ಪಿಸುವ ಒಬ್ಬ ವ್ಯಕ್ತಿಯ ಹಿಂದೆ ಇಡೀ ಕುಟುಂಬದ ಎಷ್ಟು ದೊಡ್ಡ ತ್ಯಾಗವಿರುತ್ತದೆ ಎಂಬುದು ಆ ಕ್ಷಣದಲ್ಲಿ ಎಲ್ಲರಿಗೂ ಮನವರಿಕೆಯಾಯಿತು. ಅಂದು ಜಗನ್ನಾಥ ಭವನದಲ್ಲಿ ಭಾಷಣಗಳಿಗಿಂತ ಮೌನವೇ ಹೆಚ್ಚು ಮಾತನಾಡುತ್ತಿತ್ತು.


ಒಬ್ಬ ನಾಯಕನ ನಿಜವಾದ ಯೋಗ್ಯತೆ ಮತ್ತು ಗೌರವ ಅವನು ಜೀವಂತವಾಗಿದ್ದಾಗ ಪಡೆಯುವ ಚಪ್ಪಾಳಿಗಳಲ್ಲ, ಬದಲಿಗೆ ಅವನು ಇಲ್ಲದಾಗ ಜನರ ಕಣ್ಣಿನಲ್ಲಿ ಮೂಡುವ ಕಣ್ಣೀರು ಎಂಬುದನ್ನು ಈ ನುಡಿ ನಮನ ಕಾರ್ಯಕ್ರಮ ಸಾಬೀತುಪಡಿಸಿತು. ಜಗದೀಶ್ ಹಿರೇಮಣಿ ಅವರು ದೇಹವಾಗಿ ನಮ್ಮಿಂದ ದೂರವಾಗಿರಬಹುದು, ಆದರೆ ಅವರ ಸರಳತೆ, ನಿಷ್ಠೆ, ಸಂಘಟನಾ ಶಕ್ತಿ ಮತ್ತು ಅಪ್ರತಿಮ ದೇಶಭಕ್ತಿ ಸದಾಕಾಲ ನಮಗೆ ದಾರಿದೀಪವಾಗಿ ಇರಲಿದೆ. ಕಾರ್ಯಕರ್ತರ ಹೃದಯದಲ್ಲಿ ಜಗದೀಶಣ್ಣ ಎಂದಿಗೂ ಅಜರಾಮರ.

ಹೆಚ್ಚಿನ ಸುದ್ದಿ