ಬೆಂಗಳೂರು: ಪುಲಕೇಶಿನಗರ ಕ್ಷೇತ್ರಕ್ಕೆ ಕಡೆಗೂ ಕಾಂಗ್ರೆಸ್ ಅಭ್ಯರ್ಥಿ ಘೋಷಿಸಿದೆ. ಡಿ.ಕೆ ಶಿವಕುಮಾರ್ ಆಪ್ತ ಸಂಪತ್ರಾಜ್ಗೆ ಟಿಕೆಟ್ ನೀಡಲಾಗುತ್ತೆ ಎಂಬ ನಿರೀಕ್ಷೆ ಸುಳ್ಳಾಗಿದ್ದು, ಕ್ಷೇತ್ರದ ಟಿಕೆಟ್ ಎ.ಸಿ ಶ್ರೀನಿವಾಸ್ಗೆ ಸಿಕ್ಕಿದೆ.
ನಾಮಪತ್ರ ಸಲ್ಲಿಕೆಗೆ ಇನ್ನು ಕೆಲವೇ ತಾಸುಗಳು ಉಳಿದಿರುವಂತೆ ಕಾಂಗ್ರೆಸ್ ತನ್ನ ನಾಲ್ಕನೇ ಪಟ್ಟಿಯನ್ನು ಬುಧವಾರ ಸಂಜೆ ಬಿಡುಗಡೆ ಮಾಡಿದೆ. ಕೇವಲ ನಾಲ್ಕು ಮಂದಿಯ ಹೆಸರಿರುವ ಈ ಪಟ್ಟಿಯಲ್ಲಿ ಪುಲಕೇಶಿ ನಗರದಿಂದ ಎ.ಸಿ.ಶ್ರೀನಿವಾಸ್ ಅವರಿಗೆ ಅವಕಾಶ ನೀಡಿದೆ.
ಕಳೆದ ಬಾರಿ ಮಹದೇವಪುರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎ.ಸಿ. ಶ್ರೀನಿವಾಸ್ ಈ ಬಾರಿ ದೇವನಹಳ್ಳಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಎ.ಸಿ ಶ್ರೀನಿವಾಸ್ಗೆ ಪುಲಕೇಶಿನಗರ ಕ್ಷೇತ್ರದಲ್ಲಿ ಟಿಕೆಟ್ ನೀಡಿರುವ ಕಾರಣ ಅಖಂಡ ಶ್ರೀನಿವಾಸ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವುದರಿಂದ ಪುಲಿಕೇಶಿ ನಗರದಲ್ಲಿ ಶ್ರೀನಿವಾಸ್ ವರ್ಸಸ್ ಶ್ರೀನಿವಾಸ್ ಕಾಳಗ ನಡೆಯಲಿದೆ.
ಬೆಚ್ಚಿ ಬೀಳಿಸಿದ್ದ ಡಿ.ಜೆ.ಹಳ್ಳಿ ಗಲಭೆಯಲ್ಲಿ ಸಂತ್ರಸ್ತರಾಗಿದ್ದ ಶಾಸಕ ಅಖಂಡ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿರಲಿಲ್ಲ. ಇದರಿಂದ ಮನನೊಂದು ಅಖಂಡ ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ
