ಬೆಂಗಳೂರು: ನಿನ್ನೆ ರಾತ್ರೋ ರಾತ್ರಿ ಬಿಜೆಪಿ 23 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು ಬಾಕಿ 12 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಬೇಕಾಗಿದೆ. 2ನೇ ಪಟ್ಟಿಯಲ್ಲಿ 7 ಹಾಲಿ ಶಾಸಕರನ್ನ ಕೈ ಬಿಡಲಾಗಿದ್ದು, ಮೊದಲನೇ ಪಟ್ಟಿ ಹಾಗೂಎರಡನೇ ಪಟ್ಟಿ ಸೇರಿಸಿ ಒಟ್ಟು 13 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಒಟ್ಟಾರೆ ರಾಜ್ಯ 212 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಹುಬ್ಬಳ್ಳಿ – ಧಾರವಾಡ ಕೇಂದ್ರ, ಶಿವಮೊಗ್ಗ ನಗರ, ನಾಗಠಾಣಾ, ಸೇಡಂ, ಕೊಪ್ಪಳ, ಮಾನ್ವಿ, ರೋಣ, ಹಗರಿ ಬೊಮ್ಮನಹಳ್ಳಿ, ಹೆಬ್ಬಾಳ, ಗೋವಿಂದರಾಜನಗರ, ಕೃಷ್ಣರಾಜ, ಮಹದೇವಪುರ 12 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗ ಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ರಾಜ್ಯ ನಾಯಕರು ಹೈಕಮಾಂಡ್ ಜೊತೆ ಚರ್ಚೆಯನ್ನ ನಡೆಸುತ್ತಿದ್ದಾರೆ.
ಎರಡನೇ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ಟಿಕೆಟ್ ಘೋಷಿಸದೇ ಇರೋದು ಕುತೂಹಲ ಮೂಡಿಸಿದ್ದು, ಶೆಟ್ಟರ್ಗೆ ಟಿಕೆಟ್ ಕೈತಪ್ಪುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ. ಇತ್ತ ಸಚಿವ ವಿ.ಸೋಮಣ್ಣ ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ಘೋಷಣೆ ಕೂಡಾ ಬಾಕಿ ಇದ್ದು ಯಾರಿಗೆ ಟಿಕೆಟ್ ಸಿಗಬಹುದು ಎಂಬ ಪ್ರಶ್ನೆ ಇದೆ. ಬೆಂಗಳೂರಿನ ಮಹದೇವಪುರ ಕ್ಷೇತ್ರದ ಟಿಕೆಟ್ ಘೋಷಣೆಯೂ ಬಾಕಿ ಇದ್ದು ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ಟಿಕೆಟ್ ಕೈತಪ್ಪುವ ಭೀತಿ ಇದೆ
