Saturday, June 6, 2026
Homeಚುನಾವಣೆ 2023ತಾಯಿ ಮನೆಯಿಂದ ನನ್ನನ್ನು ಓಡಿಸಿದ್ದಾರೆ: ರಾಮದಾಸ್ ಕಿಡಿ

ತಾಯಿ ಮನೆಯಿಂದ ನನ್ನನ್ನು ಓಡಿಸಿದ್ದಾರೆ: ರಾಮದಾಸ್ ಕಿಡಿ

ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ತನ್ನ 3ನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಬಾರಿ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಎಸ್‌.ಎ. ರಾಮದಾಸ್‌ಗೆ ಟಿಕೆಟ್ ಕೈತಪ್ಪಿದ್ದು, ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ಅಸಮಾಧಾನ ಹೊರಹಾಕಿರುವ ರಾಮದಾಸ್, 30 ವರ್ಷದಿಂದ ಇದ್ದ ತಾಯಿ ಮನೆಯಿಂದ ನನ್ನನ್ನು ಓಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಟಿಕೆಟ್ ಘೋಷಣೆ ಬಳಿಕ ಕೆಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಹಾಗೂ ಸಂಸದ ಪ್ರತಾಪ್ ಸಿಂಹ ರಾಮದಾಸ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ರಾಮದಾಸ್ ತಾವು ಯಾರೊಂದಿಗೂ ಮಾತನಾಡುವುದಿಲ್ಲ ಎಂದು ಹೇಳಿ ಅವರನ್ನು ಹಾಗೇ ಕಳುಹಿಸಿದ್ದಾರೆ. 30 ವರ್ಷದಿಂದ ಇದ್ದ ತಾಯಿ ಮನೆಯಿಂದ ನನ್ನನ್ನು ಓಡಿಸಿದ್ದಾರೆ. ಈಗ ಆ ಮನೆಯಲ್ಲಿ ನಾನು ಇರಬೇಕಾ ಅಥವಾ ಬೇಡವಾ ಎಂಬುದುನ್ನು ಮಂಗಳವಾರ ಸಂಜೆ ತಿಳಿಸುತ್ತೇನೆ. ನಾನು ಸದ್ಯ ಯಾರನ್ನೂ ಭೇಟಿ ಮಾಡಲ್ಲ ಎಂದ ರಾಮದಾಸ್ ಮನೆಗೆ ಬಂದಿದ್ದ ಶ್ರೀವತ್ಸ ಹಾಗೂ ಪ್ರತಾಪ್ ಸಿಂಹ ಅವರನ್ನು ಭೇಟಿ ಮಾಡದೇ ಮನೆಯ ಮತ್ತೊಂದು ಬಾಗಿಲಿನಿಂದ ಹೊರನಡೆದಿದ್ದಾರೆ.

ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ, ನಾವು ರಾಮದಾಸ್ ಅವರ ಆಶೀರ್ವಾದ ಪಡೆಯಲು ಮನೆಗೆ ಬಂದಿದ್ದೆವು. ಟಿಕೆಟ್ ತಪ್ಪಿರುವ ಕಾರಣ ಅವರಿಗೆ ನೋವಾಗಿದೆ. 30 ವರ್ಷಗಳಿಂದ ಇದ್ದ ಅವಕಾಶ ಕೈ ತಪ್ಪಿದ ಕಾರಣ ರಾಮದಾಸ್ ಅವರಿಗೆ ಬೇಸರ ಆಗಿರುವುದು ಸಹಜ. ಅವರು ಮಂಗಳವಾರ ನಮ್ಮನ್ನು ಭೇಟಿ ಮಾಡುತ್ತೇನೆ, ಪಕ್ಷದ ಜೊತೆ ಇರುತ್ತೇನೆ ಎಂದು ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ. ಪಕ್ಷವನ್ನು ತಾಯಿ ಎಂದು ಭಾವಿಸಿರುವ ಅವರು ತಾಯಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು. 30 ವರ್ಷದಿಂದ ನಾವು ಅವರ ಜೊತೆಗೆ ಇದ್ದೆವು. ಅವರು ನನ್ನ ವಿರುದ್ಧ ಕೆಲಸ ಮಾಡಲ್ಲ. ಆ ವಿಶ್ವಾಸ ನನಗೆ ಇದೆ ಎಂದು ಶ್ರೀವತ್ಸ ಹೇಳಿಕೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ